ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಸಮರ್ಥನೆ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ತಮ್ಮನ್ನು ತಾವು ಬಲವಾಗಿ ಸಮರ್ಥಿಸಿಕೊಂಡ ಸುಷ್ಮಾ ಸ್ವರಾಜ್, ನಾನಾಗಲಿ, ನನ್ನ ಕುಟುಂಬವಾಗಲಿ ಯಾವ ರೀತಿಯಿಂದಲೂ ಲಲಿತ್ ಮೋದಿಗೆ ಸಹಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಭೋಪಾಲ್ ಅನಿಲ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟರಲ್ಲ ಅದು ತಪ್ಪಲ್ಲವಾ? ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಪತ್ನಿ ವಾದ ಮಂಡಿಸಿದ್ದರಲ್ಲಾ ಅದು ತಪ್ಪಲ್ಲವಾ? ಎಂದು ಪ್ರಶ್ನಿಸುವ ಮೂಲಕ ಸುಷ್ಮಾ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಂಸತ್ತಿನಲ್ಲಿ ಹಲವು ಐತಿಹಾಸಿಕ ಚರ್ಚೆಗಳಿಗೆ ಸಾಕ್ಷಿಯಾಗಿರುವ ಆಡ್ವಾಣಿ ಅವರು, ಇಂದು ಸುಷ್ಮಾ ಸ್ವರಾಜ್ ಅವರು ಸುಮಾರು 30 ನಿಮಿಷಗಳ ಕಾಲ ವಿವರವಾಗಿ ನೀಡಿದ ಸ್ಪಷ್ಟನೆ ಹಾಗೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement