ಅಹಮದಾಬಾದ್: 2002ರ ಗುಜರಾತ್ ನ ಕೋಮುಗಲಭೆ ಪ್ರಕರಣದಲ್ಲಿ ಹಾಲಿ ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದಿದ್ದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರನ್ನು ರಾಜ್ಯ ಸರ್ಕಾರ ಸೇವೆಯಿಂದಲೇ ವಜಾಗೊಳಿಸಿದೆ.
ನನಗೆ ವಜಾ ಆದೇಶ ಸಿಕ್ಕಿದೆ ಎಂದು ಸ್ವತಃ ಸಂಜೀವ್ ಭಟ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ 27 ವರ್ಷಗಳ ಸೇವೆಯನ್ನು ನಾನು ಸಂತೋಷದಿಂದ ನಡೆಸಿದ್ದೇನೆ. ಹಾಲಿ ಸರ್ಕಾರ ಕಪೋಲಕಲ್ಪಿತ ಆರೋಪಗಳ ಬಗ್ಗೆ ನೆಪ ಮಾತ್ರದ ತನಿಖೆ ನಡೆಸಿ, ಅನಧಿಕೃತ ಗೈರುಹಾಜರಾದ ಆರೋಪ ಹೊರಿಸಿ ಕರ್ತವ್ಯದಿಂದ ಬಿಡುಗಡೆ ಮಾಡಿದೆ ಎಂದು ಸಂಜೀವ್ ಭಟ್ ಬರೆದುಕೊಂಡಿದ್ದಾರೆ.
ಜುನಾಗಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸೂಚನೆಯಿಲ್ಲದೆ ಸೇವೆಗೆ ಗೈರು ಹಾಜರಾಗಿದ್ದಕ್ಕಾಗಿ ಹಾಗೂ ಕಚೇರಿ ವಾಹನಗಳ ದುರ್ಬಳಕೆ ಆರೋಪದ ಮೇಲೆ ಅವರನ್ನು 2011ರಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ತಾಯಿಯ ಅನಾರೋಗ್ಯ ಕಾರಣವೊಡ್ಡಿ ತಾವು ಗೈರುಹಾಜರಿದ್ದುದಾಗಿ ಭಟ್ ಹೇಳಿಕೊಂಡಿದ್ದರು. ಜೊತೆಗೆ 2002ರ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಾನಾವತಿ ಆಯೋಗದೆದುರು ಹಾಜರಾಗಲು ತಾವು ಅಹ್ಮದಾಬಾದ್ ನಲ್ಲಿರುವುದು ಅವಶ್ಯವೆಂದೂ ಕೇಳಿಕೊಂಡಿದ್ದರು. ಆದರೆ ಇದೀಗ ಅವರನ್ನು ಕಳೆದ ವರ್ಷದ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ವಜಾ ಮಾಡಲಾಗಿದೆ.
Advertisement