ನವದೆಹಲಿ: ಉಪಹಾರ್ ಅಗ್ನಿ ದುರಂತದಲ್ಲಿ ಅನ್ಸಲ್ ಸಹೋದರರಿಗೆ ಸುಪ್ರೀಂ ಕೋರ್ಟ್ ವಿಧಿಸಿರಿವ 60 ಕೋಟಿ ರುಪಾಯಿ ದಂಡದ ಹಣವನ್ನು ತಿರಸ್ಕರಿಸುವಂತೆ ನೊಂದ ಕುಟುಂಬಗಳು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದು, ಈ ಸಂಬಂಧ ಕಾನೂನು ಸಲಹೆ ಪಡೆಯಲಾಗುವುದು ಎಂದು ಶುಕ್ರವಾರ ದೆಹಲಿ ಸರ್ಕಾರ ತಿಳಿಸಿದೆ.
ಈ ಸಂಬಂಧ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ನೊಂದ ಮೂರು ಕುಟುಂಬಗಳ ಸದಸ್ಯರು ಸುಪ್ರೀಂ ಕೋರ್ಟ್ ಆದೇಶಿಸಿರುವ 60 ಕೋಟಿ ರುಪಾಯಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದೆ.
'ಅವರ ಬೇಡಿಕೆ ಕುರಿತು ಸರ್ಕಾರ ಕಾನೂನು ಸಲಹೆ ಪಡೆಯಲಿದೆ. ಅಲ್ಲದೆ ಮಾನವ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತರಬೇಕು ಎಂಬ ನೊಂದ ಕುಟುಂಬಗಳ ಸಲಹೆಯನ್ನು ಸ್ವೀಕರಿಸಲಾಗಿದೆ' ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ 1997ರ ಉಪಹಾರ್ ಚಿತ್ರಮಂದರಿದ ಅಗ್ನಿ ದುರಂತ ಪ್ರಕರಣದ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ಆರೋಪಿಗಳಾದ ಉದ್ಯಮಿ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ತಲಾ 30 ಕೋಟಿ ರುಪಾಯಿ ದಂಡ ವಿಧಿಸಿತ್ತು. ಅಲ್ಲದೆ 60 ಕೋಟಿ ರುಪಾಯಿ ದಂಡದ ಮೊತ್ತವನ್ನು ದೆಹಲಿ ಸರ್ಕಾರಕ್ಕೆ ಜಮೆ ಮಾಡುವಂತೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಆದೇಶಿಸಿತ್ತು.
Advertisement