ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ವಿದ್ಯಾರ್ಥಿಗಳಿಗೆ ಹೊರಡಿಸಿದ್ದ ಪ್ರಶಂಸನಾ ಪತ್ರದಲ್ಲಿನ ಅಕ್ಷರಗಳ ದೋಷಗಳಿಂದ ಸಚಿವೆ ಸ್ಮೃತಿ ಇರಾನಿ ಅವರು ತೀವ್ರ ಮುಜುಗರಕ್ಕೊಳಗಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಬಿಎಸ್ಸಿ ಇರಾನಿ ಬಳಿ ಕ್ಷಮೆಯಾಚಿಸಿದೆ.
ಪ್ರಶಂಸನಾ ಪತ್ರದಲ್ಲಿ ದೋಷವಿರುವ ಕುರಿತಂತೆ ವಿವಾದ ಉಂಟಾದ ಕಾರಣ ದೋಷ ಕುರಿತಂತೆ ವಿವರಣೆ ನೀಡುವಂತೆ ಸ್ಮೃತಿ ಇರಾನಿ ಅವರು ಸಿಬಿಎಸ್ಸಿಗೆ ಸೂಚನೆ ನೀಡಿದ್ದರು. ಈ ಸೂಚನೆಗೆ ಇಂದು ಪ್ರತಿಕ್ರಿಯೆ ನೀಡಿರುವ ಸಿಬಿಎಸ್ಸಿ ಕಾರ್ಯದರ್ಶಿ ಜೋಸೆಫ್ ಇಮಾನುಯೆಲ್ ಅವರು, ಇರಾನಿ ಅವರಿ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ಸ್ಮೃತಿ ಇರಾನಿ ಅವರಿಗೆ ಕ್ಷಮೆ ಯಾಚಿಸಿದ್ದು, ತಪ್ಪಾಗಿ ಪ್ರಕಟವಾಗಿರುವ ಪತ್ರಗಳ ಬದಲಿಗೆ ಹೊಸ ಪ್ರಶಂಸಾ ಪತ್ರಗಳನ್ನು ನೀಡುವುದಾಗಿ ಹೇಳಿದ್ದಾರೆ.
ಪ್ರತೀವರ್ಷದಂತೆ ಈ ವರ್ಷವೂ ಸಹ ಸಿಬಿಎಸ್ಸಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ, ಶಾಲೆಯ ಪ್ರಾಂಶುಪಾಲರಿಗೆ ಹಾಗೂ ಶಿಕ್ಷಕರಿಗೆ ಕೇಂದ್ರ ಶಿಕ್ಷಣ ಸಚಿವರು ಪ್ರಶಂಸನಾ ಪತ್ರವನ್ನು ನೀಡಿದ್ದರು. ಕೇಂದ್ರ ಶಿಕ್ಷಣ ಸಚಿವರು ಕಳುಹಿಸಿದ್ದ ಈ ಪತ್ರದಲ್ಲಿ ಹಲವು ಅಕ್ಷರ ದೋಷಗಳಿರುವುದು ಕಂಡುಬಂದಿತ್ತು. ಪತ್ರದಲ್ಲಿ ಇಂಗ್ಲೀಷ್ ನ ‘minister’ (minster) ಮತ್ತು ಹಿಂದಿಯ ಸಂಸಧನ್ (ಸಂಸಧಾನ್) ಪದಗಳು ಹಾಗೂ ಸಚಿವರ ಹೆಸರು ತಪ್ಪಾಗಿರುವುದು ಕಂಡು ಬಂದಿತ್ತು. ಶಿಕ್ಷಣ ಇಲಾಖೆ ಮಾಡಿದ ದೋಷಗಳು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡದೊಡಗಿತ್ತಲ್ಲದೇ, ಸಚಿವೆ ಸ್ಮೃತಿ ಇರಾನಿ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ದೋಷ ಕುರಿತಂತೆ ಸ್ಪಷ್ಟನೆ ನೀಡುವಂತೆ ಇರಾನಿ ಅವರು ಸಿಬಿಎಸ್ಸಿಗೆ ಸೂಚನೆ ನೀಡಿದ್ದರು.
Advertisement