
ನವದೆಹಲಿ: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಪ್ರತಿಭಟನೆ ಸ್ವರೂಪವನ್ನು ದೇಶಾದ್ಯಂತ ತೀವ್ರಗೊಳಿಸುತ್ತಿರುವ ಹಾರ್ದಿಕ್ ಪಟೇಲ್, ತಮ್ಮ ಪ್ರತಿಭಟನೆ ವೇಳೆ ಯಾವುದೇ ರಾಜಕೀಯ ಪಕ್ಷಗಳು ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನಾವಿಲ್ಲಿ ಯಾವುದೇ ಸಚಿವರನ್ನು ಭೇಟಿ ಮಾಡುವುದಿಲ್ಲ. ರಾಜಕೀಯ ಪಕ್ಷವನ್ನು ಸ್ವಾಗತಿಸುವುದಿಲ್ಲ ಎಂದು ದೆಹಲಿಯಲ್ಲಿಂದು ಹೇಳಿದ್ದಾರೆ.ಇಂದು ಅಪರಾಹ್ನ ಮಾಧ್ಯಮವನ್ನುದ್ದೇಶಿಸಿ ಮಾತನಾಡಲಿರುವ ಅವರು, ಪಟೇಲ್ ಸಮುದಾಯದ ಕೇವಲ ಶೇಕಡಾ 5ರಿಂದ 10ರಷ್ಟು ಜನರು ಮಾತ್ರ ಆರ್ಥಿಕವಾಗಿ ಸಬಲರಾಗಿದ್ದಾರೆ. ಅದಕ್ಕಾಗಿ ಆ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಈ ಪ್ರತಿಭಟನೆಯನ್ನು ದೇಶದ ಪ್ರತಿ ಮೂಲೆ ಮೂಲೆಗೆ ಕೊಂಡೊಯ್ಯಲಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು. ನಮ್ಮ ಪ್ರತಿಭಟನೆಗೆ ಜಾಟ್ ಮತ್ತು ಗುರ್ಜರ್ ಸಮುದಾಯದ ಬೆಂಬಲವನ್ನು ಕೋರುತ್ತಿದ್ದೇವೆ ಎಂದು ಹೇಳಿದರು.
ತಮ್ಮ ಪ್ರತಿಭಟನೆಯನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ, ಇದು ವರ್ಷಗಳವರೆಗೆ ಮುಂದುವರಿಯಬಹುದು. ಇಡೀ ದೇಶದಲ್ಲಿ ಪಟೇಲ್ ಸಮುದಾಯದವರು 27 ಕೋಟಿ ಜನ ಇದ್ದಾರೆ. ಅವರೆಲ್ಲರನ್ನೂ ಒಟ್ಟುಗೂಡಿಸಿ ಈ ಪ್ರತಿಭಟನೆಗೆ ಸೇರಿಸಬೇಕು. ಅದಕ್ಕಾಗಿ ದೇಶಾದ್ಯಂತ ಪ್ರಚಾರ ನಡೆಸುತ್ತೇವೆ ಎಂದು ಹಾರ್ದಿಕ್ ಪಟೇಲ್ ಮಾಧ್ಯಮಗಳಿಗೆ ತಿಳಿಸಿದರು.
ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಮಾಜಿ ಯೋಧರ ಪ್ರತಿಭಟನೆ ಸ್ಥಳಕ್ಕೆ ತೆರಳಿ ಹಾರ್ದಿಕ್ ಪಟೇಲ್ ಮಾತುಕತೆ ನಡೆಸುತ್ತಾರೆ ಎಂಬ ವದಂತಿಯನ್ನು ತಳ್ಳಿ ಹಾಕಿದ ಅವರು, ತಾವು ಜಾಟ್ ಸಮುದಾಯವನ್ನು ಭೇಟಿ ಮಾಡಲು ದೆಹಲಿಗೆ ಆಗಮಿಸಿದ್ದು, ಅಗತ್ಯಬಿದ್ದರೆ ಜಂತರ್ ಮಂತರ್ ಗೆ ಹೋಗುವುದಾಗಿ ಹೇಳಿದ್ದಾರೆ.
Advertisement