ಭೂ- ಸುಗ್ರೀವಾಜ್ಞೆಯನ್ನು ಮರು ಘೋಷಣೆ ಮಾಡುವುದಿಲ್ಲ: ಪ್ರಧಾನಿ ಮೋದಿ

ಎನ್ ಡಿಎ ಸರ್ಕಾರ ಪ್ರಸ್ತಾವಿತ ಭೂ- ಸುಗ್ರೀವಾಜ್ಞೆಯನ್ನು ಮರು ಘೋಷಣೆ ಮಾಡುವುದಿಲ್ಲ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ...
ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಎನ್ ಡಿಎ ಸರ್ಕಾರ ಪ್ರಸ್ತಾವಿತ ಭೂ- ಸುಗ್ರೀವಾಜ್ಞೆಯನ್ನು ಮರು ಘೋಷಣೆ ಮಾಡುವುದಿಲ್ಲ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭೂ ಸ್ವಾಧೀನ ಕಾನೂನನ್ನು ಸುಧಾರಣೆ ಮಾಡಲು 13 ಅಂಶಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಇಂದು ಮಾತನಾಡಿದ ಅವರು, ಭೂಮಿ ಸುಗ್ರೀವಾಜ್ಞೆ ರದ್ದಾಗಲು ಅವಕಾಶ ನೀಡಲು ನಿರ್ಧರಿಸಿದ್ದೇವೆ. ರೈತರ ಪ್ರಯೋಜನಕ್ಕೆ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ವಿರೋಧ ಪಕ್ಷದವರು ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಮತ್ತು ಅವರಲ್ಲಿ ಭಯದ ವಾತಾವರಣ ಮೂಡಿಸಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು.

 ಭೂ ಸ್ವಾಧೀನ ಕಾಯ್ದೆ ಬಗ್ಗೆ ಕೆಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಆದರೆ ರೈತರ ಹಿತಾಸಕ್ತಿಗೆ ಬದ್ಧವಾಗಿ ಕಾಯ್ದೆ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ ಎಂದು ಹೇಳಿದರು.

ಈಗ ಇರುವ ಕಾನೂನಿನಂತೆ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಪರಿಹಾರ, ಪುನರ್ವಸತಿ ಮೊದಲಾದ ಅಂಶಗಳಿಗೆ ಬದಲಾವಣೆ ತರುವ 13 ಶಾಸನಗಳನ್ನು ಜಾರಿಗೆ ತರಲು ಮೋದಿ ಸರ್ಕಾರ ಪ್ರಸ್ತಾವನೆ ನೀಡಿದೆ.

2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ ಪ್ರಕಾರ, ಒಪ್ಪಿಗೆ' ಎಂಬ ನಿಯಮವನ್ನು ಮತ್ತು 'ಸಾಮಾಜಿಕ ಪರಿಣಾಮ ನಿರ್ಧರಿಸುವಿಕೆ' ಯನ್ನು ತೆಗೆದುಹಾಕಲು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.

ಗುಜರಾತ್ ಗಲಭೆ ದಿಗ್ಭ್ರಮೆ ಮೂಡಿಸಿದೆ:
ಗುಜರಾತ್ ನಲ್ಲಿ ಮೊನ್ನೆ ಹಾರ್ದಿಕ್ ಪಟೇಲ್ ಎಂಬ ಯುವಕನ ನೇತೃತ್ವದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೋರಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರ ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಈ ಘಟನೆ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಘಟನೆ ಸಂಭವಿಸಿದ ನಂತರ ಪರಿಸ್ಥಿತಿಯನ್ನು ಅಷ್ಟೇ ತ್ವರಿತವಾಗಿ ಅಧಿಕಾರಿಗಳು ಹತೋಟಿಗೆ ತಂದರು ಎಂದು ಹೇಳಿದರು.

ಪ್ರಧಾನಮಂತ್ರಿಗಳ ಜನಧನ ಯೋಜನೆಗೆ ಜನರಿಂದ ಸಿಕ್ಕುವ ಉತ್ತಮ ಪ್ರತಿಕ್ರಿಯೆಗೆ ಹರ್ಷ ವ್ಯಕ್ತಪಡಿಸಿದ ಮೋದಿ, ಇದಕ್ಕೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಕಾರಣವಾಗಿವೆ ಎಂದರು.

ಕೇಂದ್ರ ಸರ್ಕಾರದ ಜನಧನ ಯೋಜನೆಯಿಂದ ಈ ಹಿಂದೆ ಬ್ಯಾಂಕ್ ಖಾತೆ ಹೊಂದಿರದಿದ್ದ ದೇಶದ ಸುಮಾರು 170 ದಶಲಕ್ಷ ಮಂದಿ ಹೊಸದಾಗಿ ಖಾತೆ ತೆರೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ವಚ್ಛತೆ ಕಾಪಾಡಿ: ಡೆಂಗ್ಯು ಜ್ವರವನ್ನು ತಡೆಗಟ್ಟಲು ನಿಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿ. ದಿನನಿತ್ಯ ನಮ್ಮ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿದರೆ ಡೆಂಗ್ಯುವನ್ನು ತಡೆಗಟ್ಟಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com