1965ರ ಭಾರತ-ಪಾಕ್ ಯುದ್ಧದಿಂದ ಪಾಕಿಸ್ತಾನಕ್ಕೆ ದುಬಾರಿ ವೆಚ್ಚ: ಹಮೀದ್ ಅನ್ಸಾರಿ

1965ರಲ್ಲಿ ಪಾಕಿಸ್ತಾನದ ಆಕ್ರಮಣವನ್ನು ನಾಶಪಡಿಸುವಲ್ಲಿ ಶ್ರಮಿಸಿದ ಕಾಶ್ಮೀರಿ ಜನರನ್ನು ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ...
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಯುದ್ದದ ಸಂದರ್ಭದ ಚಿತ್ರ
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಯುದ್ದದ ಸಂದರ್ಭದ ಚಿತ್ರ

ನವದೆಹಲಿ: 1965ರಲ್ಲಿ ಪಾಕಿಸ್ತಾನದ ಆಕ್ರಮಣವನ್ನು ನಾಶಪಡಿಸುವಲ್ಲಿ ಶ್ರಮಿಸಿದ ಕಾಶ್ಮೀರಿ ಜನರನ್ನು ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಾಯಕತ್ವವನ್ನು ಶ್ಲಾಘಿಸಿದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಯುದ್ಧ ಪಾಕಿಸ್ತಾನಕ್ಕೆ ದುಬಾರಿ ಮಿಲಿಟರಿ ವೆಚ್ಚ ಮತ್ತು ರಾಜಕೀಯ ಅಸಂಬದ್ಧತೆಯನ್ನು ಉಂಟುಮಾಡಿತ್ತು ಎಂದು ಹೇಳಿದ್ದಾರೆ.

1965ರ ಭಾರತ-ಪಾಕಿಸ್ತಾನ ಯುದ್ಧದ ಸುವರ್ಣ ವಿಜಯೋತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರ ತ್ಯಾಗ, ಬಲಿದಾನವನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.

ಪಾಕಿಸ್ತಾನದ "ಮೊಂಡುತನ ಮತ್ತು ತರ್ಕಬದ್ಧವಲ್ಲದ ನಂಬಿಕೆಗಳೇ ಯುದ್ಧಕ್ಕೆ ಕಾರಣವಾಯಿತು. ಭೌಗೋಳಿಕ ಮತ್ತು ಉಪಖಂಡದ ರಾಜಕೀಯ ವಾಸ್ತವಾಂಶಗಳನ್ನು ಬದಲಾಯಿಸಲು ಬಲಪ್ರಯೋಗ ಮಾಡಲಾಯಿತು ಎಂದು ಅವರು ದೇಶದ ಮೂರೂ ಸೇನೆಗಳ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.

1965ರಲ್ಲಿ ಪಾಕಿಸ್ತಾನ ನಮ್ಮ ಸೈನಿಕರ ಮೇಲೆ ಯುದ್ಧ ಮಾಡಲು ಬಂದಾಗ ಆ ಸನ್ನಿವೇಶವನ್ನು ನಿರೀಕ್ಷಿಸಿರಲಿಲ್ಲ. ಆದರೆ ಧೈರ್ಯದಿಂದ ಎದುರಿಸಿದರು. ಅದಕ್ಕೆ ನಮ್ಮ ಸೈನಿಕರು ಮತ್ತು ಲಾಲ್ ಬಹದ್ದೂರು ಶಾಸ್ತ್ರಿಯವರ ಧೈರ್ಯ ಮತ್ತು ದೃಢ ನಿಲುವು ಕಾರಣ ಎಂದರು.

ಭಾರತ ಮತ್ತು ಪಾಕಿಸ್ತಾನ ಮಧ್ಯೆ 1965 ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ 17 ದಿನಗಳ ಯುದ್ಧ ನಡೆಯಿತು. ಪಾಕಿಸ್ತಾನ 'ಆಪರೇಷನ್ ಗಿಬ್ರಲ್ತರ್' ಎಂಬ ಹೆಸರಿನಲ್ಲಿ ತನ್ನ ಸೇನಾಪಡೆಯನ್ನು ಜಮ್ಮು-ಕಾಶ್ಮೀರದ ಒಳಗೆ ನುಗ್ಗಿಸಿತು. ಅದಕ್ಕೆ ಪ್ರತಿಯಾಗಿ ಭಾರತ ತನ್ನ ಸೇನೆಯನ್ನು ಯುದ್ಧಕ್ಕೆ ಕಳುಹಿಸಿತು. ಯುದ್ಧದಲ್ಲಿ ಎರಡೂ ಕಡೆಯ ಸಾವಿರಾರು ಸೈನಿಕರು ಸಾವನ್ನಪ್ಪಿದ್ದರು. ನಂತರ ಸೋವಿಯತ್ ಒಕ್ಕೂಟ ಮತ್ತು ಅಮೆರಿಕದ ಮಧ್ಯಸ್ಥಿಕೆಯಿಂದ ಹಾಗೂ ನಂತರ ತಾಷ್ಕೆಂಟ್ ಒಪ್ಪಂದದಿಂಗಾಗಿ ಕದನ ವಿರಾಮ ಘೋಷಿಸಲಾಯಿತು. ಎರಡೂ ಕಡೆಯವರು ತಾವೇ ಗೆದ್ದಿದ್ದು ಎಂದು ಘೋಷಣೆ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com