ನವದೆಹಲಿ: ಮುಂಬರುವ ಬಿಹಾರ ವಿಧಾನ ಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಬಿಹಾರ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ಕೇಂದ್ರ ಸಚಿವರ ಜೊತೆ ಇಂದು ಸಭೆ ನಡೆಸಿದ ಅಮಿತ್ ಶಾ ಕೇಂದ್ರ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಜನಪ್ರಿಯಗೊಳಿಸಲು ಹಾಗೂ ಸಾಮಾನ್ಯ ಜನರಿಗೆ ತಲುಪಿಸಲು ಸರ್ಕಾರದ ಜೊತೆ ಸಚಿವರು ಕೈ ಜೋಡಿಸಿ ಸಹಕಾರ ನೀಡಲು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನ ಧನ್ ಯೋಜನೆಯ ನಂತರ ಮತ್ತೊಂದು ಪ್ರಮುಖ ಯೋಜನೆಯಾದ ಮುದ್ರಾಮೇಳ ಯೋಜನೆಯನ್ನು ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಗೆ ಮುನ್ನ ಜಾರಿಗೆ ತರಲು ಅಮಿತ್ ಶಾ ನಿರ್ಧರಿಸಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಮುದ್ರಾ ಮೇಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು ಹಾಗೂ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರ ಸಾಲ ನೀಡಲು ಮುದ್ರಾ ಮೇಳ ಯೋಜನೆಯನ್ನು ಸೆಪ್ಟಂಬರ್ ನಲ್ಲಿ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಈ ಯೋಜನೆಯಡಿ ಫಲಾನುಭವಿಗಳು 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
Advertisement