ರಾಯಪುರ: ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ಓರ್ವ ಪೊಲೀಸ್ ಪೇದೆ ಮೃತಪಟ್ಟಿದ್ದು, ಮತ್ತೊಬ್ಬ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೀಪಲ್ಸ್ ಲಿಬಿರೇಶನ್ ಗೆರಿಲ್ಲಾ ಆರ್ಮಿ ಸಪ್ತಾಹವನ್ನು ಸಿಪಿಎಂ ಆಚರಿಸುತ್ತಿದ್ದು ಈ ಸಪ್ತಾಹದ ಮೊದಲ ದಿನವೇ ಈ ಕೃತ್ಯ ನಡೆದಿರುವುದು ಗಮನಾರ್ಹವಾಗಿದೆ.
ಕಂಕೇರ್ ಜಿಲ್ಲೆಯ ಕೋಯಲಿಬೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಡಿ ರಕ್ಷಣಾ ಪಡೆ ಮತ್ತು ಜಿಲ್ಲಾ ಪೊಲೀಸ್ ತಂಡ ಜಂಟಿ ಕಾರ್ಯಾಚರಣೆಗೆಂದು ವಾಹನಗಳಲ್ಲಿ ಹೋಗುತ್ತಿದ್ದಾಗ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ್ದಾರೆ ಎಂದು ಕಂಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೆಂದ್ರ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಕೂಡಲೇ ಸ್ಫೋಟ ಸ್ಥಳಕ ಆಗಮಿಸಿದ ರಕ್ಷಣಾ ತಂಡ ಇಬ್ಬರು ಪೊಲೀಸರನ್ನು ರಾಯಪುರ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೇದೆ ಬೈಜುರಾಮ್ ಪೊಟಾಯಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಪೇದೆ ಸಾಂತ್ರಾಮ್ ನೆತಾಮ್ ಸ್ಥಿತಿ ಗಂಭೀರವಾಗಿದೆ ಎಂದು ಮೀನಾ ಹೇಳಿದ್ದಾರೆ.
Advertisement