ತಿರುವನಂತಪುರ: ಆರು ಕೋಟಿ ರೂಪಾಯಿಗಳ ಸೌರ ಫಲಕ ಹಗರಣದ ಆರೋಪಿಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದೆ ಎಂದು ತಮ್ಮ ವಿರುದ್ಧವಾಗಿ ಕೇಳಿಬರುತ್ತಿರುವ ಆರೋಪಗಳನ್ನು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಳ್ಳಿಹಾಕಿದ್ದಾರೆ. ತಮ್ಮ ಆತ್ಮಸಾಕ್ಷಿ ಶುದ್ಧವಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಂಗ ತನಿಖೆ ಸಮಿತಿಯ ಮುಂದೆ ಹಗರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ತಾವು ಮುಖ್ಯಮಂತ್ರಿಗೆ 550 ಕೋಟಿ ರೂಪಾಯಿ ಲಂಚ ನೀಡಿರುವುದಾಗಿ ತಿಳಿಸಿದ್ದರು.
ತಮ್ಮಲ್ಲಿ ವಿಡಿಯೋ ದಾಖಲೆಗಳಿದ್ದು, ಅದರಲ್ಲಿ ಹಗರಣದ ಎರಡನೇ ಆರೋಪಿ ಸರಿತಾ ನಾಯರ್ ಎಂಬುವವರು ಮುಖ್ಯಮಂತ್ರಿಗಳ ಜೊತೆ ಹೊಂದಾಣಿಕೆಯ ಭಂಗಿಯಲ್ಲಿ ಇರುವ ಚಿತ್ರವಿದೆ. ಇನ್ನೊಂದು ವಿಡಿಯೋದಲ್ಲಿ ಚಾಂಡಿಯವರ ಸಂಪುಟದ ಮತ್ತಿಬ್ಬರು ಸಚಿವರೊಂದಿಗೆ ಕೂಡ ಹೊಂದಾಣಿಕೆಯ ಭಂಗಿಯಲ್ಲಿ ಕುಳಿತಿರುವ ದೃಶ್ಯಗಳಿವೆ.
ಈ ವಿಷಯವನ್ನು ಇಂದು ವಿಧಾನಸಭೆ ಕಲಾಪದ ವೇಳೆ ಸಿಪಿಎಂ ಹಿರಿಯ ಶಾಸಕ ಇ.ಪಿ. ಜಯರಾಜನ್ ಎತ್ತಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಚಾಂಡಿ, ನನ್ನ ಆತ್ಮಸಾಕ್ಷಿ ಶುದ್ಧವಾಗಿದೆ. ಬೆದರಿಕೆ ರಾಜಕೀಯಕ್ಕೆ ನಾನು ಬಲಿಯಾಗುವುದಿಲ್ಲ. ನಾನು ತಲೆ ಎತ್ತಿ ನಡೆಯುತ್ತೇನೆ. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸದನದಲ್ಲಿ ಹೇಳಿಕೆ ನೀಡಿದ್ದಾರೆ.
2013ರಲ್ಲಿ ಬೆಳಕಿಗೆ ಬಂದ ಸೌರ ಫಲಕ ಹಗರಣದ ತನಿಖೆಯನ್ನು ನ್ಯಾಯಾಂಗ ಸಮಿತಿ ನಡೆಸುತ್ತಿದೆ. ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ವಿರುದ್ಧ ಕಾನೂನು ಪ್ರಕಾರ ಹೋರಾಟ ನಡೆಸುತ್ತೇನೆ ಎಂದರು.
Advertisement