ನನ್ನ ಮಗಳ ಹೆಸರು ಜ್ಯೋತಿ ಸಿಂಗ್: ನಿರ್ಭಯಾ ತಾಯಿ
ನವದೆಹಲಿ: ಮೂರು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಅದರಿಂದಾಗಿ 13 ದಿನಗಳು ಕಳೆದ ನಂತರ ಆಕೆ ಸಾವನ್ನಪ್ಪಿದ ಘಟನೆ ಇಡೀ ದೇಶದ ನಾಗರಿಕರನ್ನೇ ತಲ್ಲಣಗೊಳಿಸಿತ್ತು. ಅತ್ಯಾಚಾರಕ್ಕೊಳಗಾದ ಯುವತಿಯ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ನಿರ್ಭಯಾ ಎಂದೇ ಇದುವರೆಗೆ ಆಕೆಯನ್ನು ಕರೆಯಲಾಗುತ್ತಿತ್ತು. ಆಕೆ ಇಹಲೋಕ ತ್ಯಜಿಸಿ ಸರಿಯಾಗಿ ಮೂರು ವರ್ಷ ಕಳೆದಿದೆ.
ಇಂದು ಆ ಯುವತಿಯ ಹೆಸರು ಬಹಿರಂಗಗೊಂಡಿದೆ. ನನ್ನ ಮಗಳ ಹೆಸರು ಜ್ಯೋತಿ ಸಿಂಗ್ ಎಂದು, ಮತ್ತು ನನಗೆ ಮಗಳ ಹೆಸರನ್ನು ತಿಳಿಸುವುದರಲ್ಲಿ ಯಾವುದೇ ನಾಚಿಕೆ ಇಲ್ಲ ಎಂದು ಯುವತಿಯ ತಾಯಿಯೇ ಹೇಳಿದ್ದಾರೆ. ಜ್ಯೋತಿ ಸಿಂಗ್ ನ ತಾಯಿ ಆಶಾ ದೇವಿ ಮತ್ತು ತಂದೆ ಬದ್ರಿನಾಥ್ ಆರು ಮಂದಿ ಅತ್ಯಾಚಾರಿ ಅಪರಾಧಿಗಳಲ್ಲಿ ಒಬ್ಬ ಬಾಲಾಪರಾಧಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಆಕ್ರೋಶ, ಬೇಸರ ವ್ಯಕ್ತಪಡಿಸಿದ್ದಾರೆ.
''ನನ್ನ ಮಗಳ ಹೆಸರನ್ನು ಜನರಿಗೆ ತಿಳಿಸಲು ನನಗೇನು ನಾಚಿಕೆಯಿಲ್ಲ, ನಮ್ಮ ಮಗಳನ್ನು ಕಳೆದುಕೊಂಡ ನಂತರ ನಾವು ಸಾಕಷ್ಟು ನೊಂದಿದ್ದೇವೆ. ಯಾರು ಅತ್ಯಾಚಾರ ಮಾಡಿದ್ದರೋ ಅವರು ಅವರ ಹೆಸರು ಹೇಳಿಕೊಳ್ಳಲು ನಾಚಿಕೆಪಡಬೇಕು. ನಾನ್ಯಾಕೆ ಹಿಂಜರಿಯಲಿ. ಅದಕ್ಕಾಗಿ ನನ್ನ ಮಗಳ ಹೆಸರನ್ನು ಹೇಳುತ್ತಿದ್ದೇನೆ ಎಂದು ದೆಹಲಿಯಲ್ಲಿಂದು ಸಾವಿರಾರು ಜನರು ಸೇರಿದ್ದ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದರು.
ಬಾಲಾಪರಾಧಿ ನಾಡಿದ್ದು ಶನಿವಾರ ಜೈಲಿನಿಂದ ಹೊರಬರುವ ನಿರೀಕ್ಷೆಯಿದ್ದು, ಅಪರಾಧಿಗಳನ್ನು ಶಿಕ್ಷಿಸದಿದ್ದರೆ ನ್ಯಾಯ ಎಲ್ಲಿದೆ ಎಂದು ಆಶಾದೇವಿ ಕೇಳುತ್ತಾರೆ.
ಇಂದು ಸಂಸತ್ತು ಕಲಾಪದಲ್ಲಿಯೂ ಜ್ಯೋತಿ ಸಿಂಗ್ ಅತ್ಯಾಚಾರಿ ಅಪರಾಧಿಗಳಲ್ಲಿ ಬಾಲಾಪರಾಧಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಯಿತು. ನಟಿ ಹಾಗೂ ಸಂಸದೆ ಹೇಮ ಮಾಲಿನಿ ಮಾತನಾಡಿ, ಇತರ ನಾಲ್ವರಿಗೆ ನೀಡುವ ಶಿಕ್ಷೆಯನ್ನು ಬಾಲಾಪರಾಧಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಉಳಿದವರಿಗಿಂತ ಬಾಲಾಪರಾಧಿಯು ಹೆಚ್ಚು ತೊಂದರೆ ಮಾಡಿದ್ದಾನೆ. ಅವನದ್ದು ರಾಕ್ಷಸ ಮನಸ್ಸು, ಪುನರ್ವಸತಿ ಕೇಂದ್ರದಲ್ಲಿ ಸರಿ ಹೋಗುತ್ತಾನೆ ಎಂಬ ಯಾವ ನಂಬಿಕೆ ಕೂಡ ಇಲ್ಲ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು.ಹಾಗಾದರೆ ಮಾತ್ರ ಎಲ್ಲರಲ್ಲಿ ಭಯ ಹುಟ್ಟಿಕೊಳ್ಳುತ್ತದೆ. ತಪ್ಪು ಕೆಲಸ ಪುನರಾವರ್ತನೆಯಾಗುವುದನ್ನು ತಡೆಯಬಹುದು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ