ನವದೆಹಲಿ: ದೆಹಲಿ ಕ್ರಿಕೆಟ್ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೇಳಲು ತಾನು ಭಾನುವಾರ ಪತ್ರಿಕಾಗೋಷ್ಠಿ ಏರ್ಪಡಿಸುವುದಾಗಿ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಹೇಳಿದ್ದಾರೆ.
ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ. ಅದನ್ನೇ ಮುಂದುವರಿಸಲು ಇಷ್ಟ ಪಡುತ್ತೇನೆ ಎಂದು ಆಜಾದ್ ಹೇಳಿದ್ದಾರೆ.
ಜೇಟ್ಲಿ ವಿರುದ್ಧದ ಆರೋಪಗಳೆದುರಾದಾಗ, ಆಜಾದ್ ಈ ಆರೋಪಗಳು ನಿಜ ಎಂದು ಹೇಳಿದ್ದರು. ಆದಾಗ್ಯೂ, ಪಕ್ಷದವರ ವಿರುದ್ಧವೇ ಮಾತಾಡುತ್ತಿದ್ದ ಆಜಾದ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ಲಾಲ್ ಫೋನಾಯಿಸಿ ಭೇಟಿ ಮಾಡುವಂತೆ ಆದೇಶಿಸಿದ್ದರು.
ಏತನ್ಮಧ್ಯೆ, ಆಜಾದ್ ಅವರನ್ನು ಬಿಜೆಪಿ ಬಾಯ್ಮುಚ್ಚಿಸುತ್ತಿದೆ ಎಂಬ ಸುದ್ದಿ ಬಗ್ಗೆ ಟ್ವೀಟ್ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಬಾಯ್ಮುಚ್ಚಿಸಿದ್ದಾರೆ ಎಂಬ ವದಂತಿಗೆ ಕಿವಿಗೊಡಬೇಡಿ. ನನ್ನ ಹೋರಾಟ ಕ್ರೀಡೆಯಲ್ಲಿರುವ ಭ್ರಷ್ಟಾಚಾರದ್ದು ಮತ್ತು ನಾನಿದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.