ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಲಾಹೋರ್ಗೆ ಅನಿರೀಕ್ಷಿತ ಭೇಟಿ ಕೊಟ್ಟು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಿರುವ ಬಗ್ಗೆ ವಿಪಕ್ಷಗಳು ಟೀಕಾಪ್ರಹಾರ ಮಾಡಿವೆ.
ಅಫ್ಘಾನಿಸ್ತಾನದಿಂದ ದೆಹಲಿಗೆ ಮರಳಬೇಕಾಗಿದ್ದ ಮೋದಿ, ಅಪರಾಹ್ನ ತಾನು ಲಾಹೋರ್ಗೆ ಹೋಗಿ ಶರೀಫ್ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದೇ ತಡ, ವಿಪಕ್ಷಗಳು ಮೋದಿ ವಿರುದ್ಧ ಟೀಕೆ ಮಾಡಲು ಶುರು ಮಾಡಿವೆ.
1993ರ ಮುಂಬೈ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ನಾಳೆ ತಮ್ಮ 60ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಆದ್ದರಿಂದ ಮೋದಿಯವರು ದಾವೂದ್ನ ಬರ್ತ್ಡೇ ಕೇಕ್ ತಿನ್ನಲು ಪಾಕ್ಗೆ ಹೋಗಿದ್ದಾರೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ ಹೇಳಿದ್ದಾರೆ.
ಅದೇ ವೇಳೆ ಮೋದಿ ಶರೀಫ್ ಅವರನ್ನು ಭೇಟಿಯಾದರೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಗಟ್ಟಿಯಾಗುವುದೇ? ಎಂದು ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಪ್ರಶ್ನಿಸಿದ್ದಾರೆ.
ಮೋದಿಯವರ ಈ ಸಾಹಸಗಳು ದೇಶದ ರಕ್ಷಣಾ ಕಾರ್ಯವನ್ನು ಬಾಧಿಸುತ್ತದೆ. ಇದು ಸರಿಯಾದ ನಡೆಯಲ್ಲ ಎಂದು ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಹೇಳಿದ್ದಾರೆ.
2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೇ ಭೇಟಿ ನೀಡಿದ್ದರು. ಅದಾದ ನಂತರ ಪಾಕ್ಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ.