
ಶ್ರೀನಗರ: ಕೆಲವು ಪ್ರಚೋದಕ ಗುಂಪು ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದ್ದು, ಉಭಯ ದೇಶಗಳ ನಾಯಕರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕಾಶ್ಮೀರ ಪ್ರತ್ಯೇಕತಾವಾದಿಗಳು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅನಿರೀಕ್ಷಿತ ಭೇಟಿಯನ್ನು ಸ್ವಾಗತಿಸಿದ್ದ ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ಮುಖಂಡ ಮಿರ್ವೈಜ್ ಉಮರ್ ಫಾರೂಕ್, ಭಾರತ-ಪಾಕ್ ನಡುವೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮೋದಿ- ನವಾಜ್ ಷರೀಫ್ ನಾಯಕತ್ವ ಪ್ರಯತ್ನಿಸಲಿದೆ. ಆದರೆ ಸಂಬಂಧ ಉತ್ತಮಗೊಳ್ಳುವುದಕ್ಕೆ ಅಡ್ಡಿಯಾಗಿರುವ ಕೆಲವು ಪ್ರಚೋದಕ ಸಂಘಟನೆಗಳ ಬಗ್ಗೆ ಉಭಯ ನಾಯಕರೂ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಭಾರತ-ಪಾಕ್ ನಡುವಿನ ಸೌಹಾರ್ದಯುತ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂಬುದಕ್ಕೆ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅನಿರೀಕ್ಷಿತ ಭೇಟಿ ಮತ್ತಷ್ಟು ಪುಷ್ಠಿ ನೀಡಿದೆ. ಎರಡು ದೇಶಗಳ ನಾಗರಿಕರಲ್ಲಿ ಮಾತ್ರವಲ್ಲದೇ, ದಕ್ಷಿಣ ಏಷ್ಯಾದ ಭಾಗದಲ್ಲೇ ಹೊಸ ನಿರೀಕ್ಷೆಯೊಂದು ಮೂಡಿದೆ ಎಂದು ಫಾರೂಕ್ ಅಭಿಪ್ರಾಯಪಟ್ಟಿದ್ದಾರೆ.
Advertisement