ನವೆದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕಂಪ್ಯೂಟರ್ ದಾಖಲೆಗಳನ್ನು ದೆಹಲಿಯ ಎಸ್ಐಟಿ ಪೊಲೀಸರಿಗೆ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಶನಿವಾರ ನೀಡಿದ್ದಾರೆ.
ಸುನಂದಾ ಅವರ ನಿಗೂಡ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ಎಸ್ಐಟಿ ಪೊಲೀಸರು ಸುನಂದಾ ಪುಷ್ಕರ್ ಅವರ ಪತಿ ಹಾಗೂ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರನ್ನು ಈವರೆಗೂ 2 ಬಾರಿ ವಿಚಾರಣೆಗೊಳಪಡಿಸಿದ್ದು, ಇಂದು ಸಹ ವಿಚಾರಣೆಗೆ ಹಾಜರಾಗುವಂತೆ ಮನವಿ ಮಾಡಿಕೊಂಡಿತ್ತು. ಪೊಲೀಸರ ಮನವಿಯಂತೆ ಇಂದು ವಿಚಾರಣೆಗೆ ಹಾಜರಾದ ಶಶಿ ತರೂರ್ ಅವರು, ತಮ್ಮ ಕಂಪ್ಯೂಟರ್ನ ಎಲ್ಲಾ ದಾಖಲೆಗಳನ್ನು ಎಸ್ಐಟಿ ಪೊಲೀಸರಿಗೆ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಅವರು, ನನ್ನ ಹಾಗೂ ಪೊಲೀಸರ ನಡುವೆ ನಡೆಯುತ್ತಿರುವ ಮಾತುಕತೆಗಳ ಕುರಿತು ನನಗೆ ಮಾಹಿತಿಯಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪಾಲಿಸುತ್ತಿದ್ದಾರೆ. ತನಿಖೆಗೆ ಸಹಕರಿಸಬೇಕಾದದ್ದು ಭಾರತದ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದ್ದು, ನಾನು ಆ ಕರ್ತವ್ಯವನ್ನು ಪಾಲಿಸುತ್ತಿದ್ದೇನೆ. ತನಿಖಾಧಿಕಾರಿಗಳು ಯಾವಾಗ ಮಾತನಾಡಬೇಕೆಂದರು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
Advertisement