ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವತ್ತೂ ಪರಿಸರ ಸಚಿವಾಲಯದ ಕೆಲಸ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.
ರಾಹುಲ್ ಗಾಂಧಿ ಪರಿಸರ ಸಚಿವಾಲಯದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಮಾಜಿ ಸಚಿವೆ ಜಯಂತಿ ನಟರಾಜನ್ ಇತ್ತೀಚೆಗೆ ಆರೋಪಮಾಡಿದ್ದರು. ಅದಕ್ಕೆ ರಮೇಶ್ ಈ ಪ್ರತಿಕ್ರಿಯೆ ನೀಡಿದ್ದಾರೆ.
2009ರಿಂದ 11ರ ವರೆ-ಗೆ ಪರಿಸರ ಸಚಿವರಾಗಿದ್ದ ಅವಧಿಯನ್ನು ಮುಖ್ಯವಾಗಿಟ್ಟುಕೊಂಡು ತಾವು ಬರೆದ `ಗ್ರೀನ್ ಸಿಗ್ನಲ್ಸ್' ಕೃತಿ ಬಿಡುಗಡೆಗೂ ಮುನ್ನ ಜೈರಾಂ ಈ ಹೇಳಿಕೆ ನೀಡಿದ್ದಾರೆ. ಜೈರಾಂ ಅವರು ಜಯಂತಿ ನಟರಾಜನ್ ಅವರಿಗಿಂತ ಮೊದಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದರು. ಮೆಗಾ ಯೋಜನೆಗಳಿಗೆ ಸಂಬಂಧಿಸಿ ರಾಹುಲ್ ಕೆಲವು ನಿರ್ದೇಶನ ನೀಡುತ್ತಿದ್ದರು.
ಈ ಯೋಜನೆಗಳು ಅನುಷ್ಠಾನವಾಗದ್ದಕ್ಕೆ ಕೊನೆಗೆ ತನ್ನನ್ನೇ ಹರಕೆಯ ಕುರಿ ಮಾಡಿದರು ಎಂದು ಜಯಂತಿ ಆರೋಪಿಸಿದ್ದರು. ಜಯಂತಿ ಆರೋಪದ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿರುವ ಜೈರಾಂ, ಆ ಕುರಿತು ಅವರನ್ನೇ ಕೇಳಿ ಎಂದಿದ್ದಾರೆ.
Advertisement