ನವದೆಹಲಿ: ಅಣು, ಜಲ, ಉಷ್ಣ, ಗ್ಯಾಸ್, ಸೂರ್ಯ, ಗಾಳಿ, ಬಯೋ- ಗ್ಯಾಸ್ ಶಕ್ತಿಯ ಏಳು ಕುದುರೆಗಳು. ಭಾರತ ಅವುಗಳ ಪೈಕಿ ಉಷ್ಣ, ಅಣು, ಗ್ಯಾಸ್, ಜಲ ಶಕ್ತಿಯನ್ನಷ್ಟೇ ಈವರೆಗೆ ಭಾರತ ಸರಿಯಾಗಿ ಬಳಸಿಕೊಂಡಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಸಾಂಪ್ರದಾಯಿಕ ಇಂಧನ ಕ್ಷೇತ್ರದಲ್ಲಿನ ಕೊರತೆ ನೀಗಿಸಲು ನವೀಕೃತ ಶಕ್ತಿ ಮೂಲಗಳನ್ನು ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಹೊಸ ಶೋಧನೆಗಳಾಗಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ (ಆರ್ಇ- ಇನ್ವೆಸ್ಟ್) ಸಂಬಂಧಿಸಿ ಭಾನುವಾರ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಮೊದಲ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರಧಾನಿ ಈ ಸಲಹೆ ನೀಡಿದ್ದಾರೆ.
ಹೊಸ ಒಕ್ಕೂಟ: ಸೂರ್ಯ ಶಕ್ತಿ ಹೆಚ್ಚಾಗಿರುವ 50 ರಾಷ್ಟ್ರಗಳ ಒಕ್ಕೂಟ ರಚಿಸಲು ಭಾರತ ಪ್ರಯತ್ನಿಸುತ್ತಿದೆ. ಈ ಮೂಲಕ ನವೀಕೃತ ಇಂಧನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತಾಂತ್ರಿಕ ಸಾಧನೆಗಳನ್ನು ಮಾಡಿ, ಅದರ ಮೂಲಕ ಬಡವರು ಹಾಗೂ ಕುಗ್ರಾಮಗಳಿಗೂ ವಿದ್ಯುತ್ ದೊರೆಯುವಂತೆ ಮಾಡುವುದು ಉದ್ದೇಶವಾಗಿದೆ ಎಂದರು.
ವಿಶ್ವವನ್ನು ಮೆಚ್ಚಿಸಲು ನಾನು ಈ ರೀತಿ ನವೀಕರಿಸಬಹುದಾದ ಇಂಧನದ ಕುರಿತು ಆಸಕ್ತಿ ತೋರುತ್ತಿಲ್ಲ. ಬದಲಾಗಿ ದೇಶದ ಜನರ ವಿದ್ಯುತ್ ಬೇಡಿಕೆಯನ್ನು ನಿವಾರಿಸುವುದೇ ನನ್ನ ಮುಖ್ಯ ಗುರಿ ಆಗಿದೆ ಎಂದು ಮೋದಿ ತಿಳಿಸಿದ್ದಾರೆ. ದೇಶದ ಪ್ರತಿ ಮನೆಗೆ ಕೂಡ ವಿದ್ಯುತ್ ದೊರೆಯದೇ ಇದ್ದರೆ ಅಭಿವೃದ್ಧಿಯ ಫಲ ದೊರಕುವುದಿಲ್ಲ ಎಂದೂ ಹೇಳಿದ್ದಾರೆ ಪ್ರಧಾನಿ ಮೋದಿ.
ಕಡಿಮೆ ಖರ್ಚು: ಸತತ ಸಂಶೋಧನೆ ಫಲವಾಗಿ ಪ್ರತಿ ಸೋಲಾರ್ ವಿದ್ಯುತ್ ಉತ್ಪಾದನಾ ವೆಚ್ಚ ರು. 20 ರಿಂದ ರು. 7.50ಕ್ಕೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅದೂ ಇಳಿಕೆಯಾಗಲಿದೆ ಎಂದಿದ್ದಾರೆ.
Advertisement