ನವದೆಹಲಿ: ದೆಹಲಿಯಲ್ಲಿ ಅಧಿಕಾರಕ್ಕೇರಿದ ಎರಡೇ ದಿನಗಳಲ್ಲಿ ಆಪ್ ಸರ್ಕಾರ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.
ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಸೋಮವಾರ ಸಂಪುಟ ಸಭೆ ನಡೆದಿದ್ದು, ವಿದ್ಯುತ್ ದರವನ್ನು ಶೇ.50ರಷ್ಟು ಕಡಿತಗೊಳಿಸುವ ಬಗ್ಗೆ ತಕ್ಷಣವೇ ಪ್ರಸ್ತಾಪ ಸಲ್ಲಿಸುವಂತೆ ಹಣಕಾಸು, ವಿದ್ಯುತ್ ಇಲಾಖೆಗೆ ಸೂಚಿಸಲಾಗಿದೆ. ಎಲ್ಲ ಮನೆಗಳಿಗೂ 20 ಬಕೆಟ್ ನೀರನ್ನು ಪ್ರತಿ ದಿನ ಉಚಿತವಾಗಿ ಒದಗಿಸುವಂತೆ ಆದೇಶಿಸಲಾಗಿದೆ.
ಗೃಹ ರಕ್ಷಕ ಪಡೆಯ ಪ್ರಧಾನ ನಿರ್ದೇಶಕರಿಗೆ ಆಪ್ ಸರ್ಕಾರ ಪತ್ರ ಬರೆದಿದ್ದು, ಡಿಟಿಸಿ ಬಸ್ಗಳಲ್ಲಿ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಿದೆ. ಬಸ್ಗಳಲ್ಲಿ ಪ್ರಯಾಣಿಕರಿಗೆ ಸುರಕ್ಷೆ ಒದಗಿಸುವ ಉದ್ದೇಶವಿದೆ. ಇಷ್ಟೇ ಅಲ್ಲದೆ, ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮಕ್ಕೆ ತಡೆಯೊಡ್ಡಲಾಗಿದೆ. ಈ ಆದೇಶ ಎಷ್ಟು ದಿನ ಚಾಲ್ತಿಯಲ್ಲಿರುತ್ತದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ. ಭಾನುವಾರವಷ್ಟೇ ಸ್ಲಂ ನಿವಾಸಿಗಳು ತಮ್ಮ ಮನೆಗಳ ನೆಲಸಮ ವಿರೋಧಿಸಿ ಸಿಎಂ ಕೇಜ್ರಿವಾಲ್ ನಿವಾಸದೆದುರು ಪ್ರತಿಭಟನೆ ನಡೆಸಿದ್ದರು.
ಆಪ್ನ ಕ್ರಿಯಾ ಯೋಜನೆಯನ್ನು ಅನುಷ್ಠಾನ ಮಾಡಲು ಪ್ರತಿ ಇಲಾಖೆಯೂ ಏನೇನು ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡುವಂತೆಯೂ ಸಿಎಂ ಕೇಜ್ರಿವಾಲ್ ಸೂಚಿಸಿದ್ದಾರೆ. ದೆಹಲಿಯ ಹೊಸ ವಿಧಾನಸಭೆಯ ಮೊದಲ ಅಧಿವೇಶನ ಫೆ.23-24ರಂದು ನಡೆಯಲಿದೆ.
ಮೋದಿ ಹಾದಿಯಲ್ಲಿ ಕೇಜ್ರಿ: ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಪ್ರಧಾನಿ ಮೋದಿ ಅವರ ಹಾದಿಯನ್ನೇ ತುಳಿಯುತ್ತಿರುವುದು ಅವರ ಕೆಲವು ನಿರ್ಧಾರಗಳಿಂದ ಸಾಬೀತಾಗಿದೆ. ಕೇಜ್ರಿ ಅವರು ಯಾವುದೇ ಖಾತೆಯನ್ನೂ ನಿರ್ವಹಿಸದೇ, 6 ಪ್ರಮುಖ ಖಾತೆಗಳ ಹೊಣೆಯನ್ನು ಡಿಸಿಎಂ ಸಿಸೋಡಿಯಾಗೆ ವಹಿಸಿದ್ದಾರೆ.
ಅಷ್ಟೇ ಅಲ್ಲ, ವಿವಿಧ ಕ್ಷೇತ್ರಗಳ ಪರಿಣತರನ್ನು ತನ್ನ ಕಾರ್ಯಾಲಯದಲ್ಲಿ ನಿಯೋಜಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಈ ತಜ್ಞರ ತಂಡವು ಸರ್ಕಾರದ ನರವ್ಯವಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ. ಇದಲ್ಲದೆ, ತಮ್ಮ ಮಾರ್ಗಸೂಚಿಯನ್ನು ವಿವರಿಸುವಂತೆ ವಿವಿಧ ಸಚಿವಾಲಯಗಳಲ್ಲಿರುವ ಉನ್ನತ ಅಧಿಕಾರಿಗಳಿಗೆ ಕೇಜ್ರಿ ಸೂಚಿಸಿದ್ದಾರೆ. ಇವೆಲ್ಲವೂ ಪ್ರಧಾನಿ ಮೋದಿ ಅವರು ಬಳಸುತ್ತಿರುವಂತಹ ಕಾರ್ಯತಂತ್ರಗಳಾಗಿವೆ.
Advertisement