ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ಬಜೆಟ್‍ನಲ್ಲಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?

ವೇತನದಾರರಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯಿಂದ ಸಿಹಿ ಸುದ್ದಿ ಸಿಗಲಿದೆಯೇ? ಹೌದು ಎನ್ನುತ್ತದೆ ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಅರ್ನೆಸ್ಟ್ ಆ್ಯಂಡ್ ಯಂಗ್ (ಇವೈ). ಈ ಬಾರಿಯ ಬಜೆಟ್‍ನಲ್ಲಿ ಸಚಿವ ಜೇಟ್ಲಿ ಅವರು ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ...
Published on

ನವದೆಹಲಿ: ವೇತನದಾರರಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯಿಂದ ಸಿಹಿ ಸುದ್ದಿ ಸಿಗಲಿದೆಯೇ? ಹೌದು ಎನ್ನುತ್ತದೆ ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಅರ್ನೆಸ್ಟ್ ಆ್ಯಂಡ್ ಯಂಗ್ (ಇವೈ). ಈ ಬಾರಿಯ ಬಜೆಟ್‍ನಲ್ಲಿ ಸಚಿವ ಜೇಟ್ಲಿ ಅವರು ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದು ಜನಸಾಮಾನ್ಯನಲ್ಲಿ ಹೆಚ್ಚು ಹಣ ಓಡಾಡುವಂತೆ ಮಾಡುವುದಲ್ಲದೆ, ಅವರ ವೆಚ್ಚದ ಸಾಮರ್ಥ್ಯವನ್ನೂ ಹೆಚ್ಚಿಸಲಿದೆ ಎಂದು ಇವೈ ಹೇಳಿದೆ.

ಈಗಿರುವ ಆದಾಯ ತೆರಿಗೆ ವಿನಾಯ್ತಿ ಮಿತಿ ರು.2.5 ಲಕ್ಷ. ಇದೇ ವೇಳೆ, ಹಣದುಬ್ಬರ ಮತ್ತು ವೆಚ್ಚ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಸಚಿವ ಜೇಟ್ಲಿ ಅವರು, ವಿವಿಧ ಭತ್ಯೆಗಳ ವಿನಾಯ್ತಿ ಮಿತಿಯನ್ನೂ ಏರಿಸುವ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. ಇವುಗಳ ಪೈಕಿ ಸಾರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸ ಭತ್ಯೆ, ರಜೆ ನಗದೀಕರಣ ವಿನಾಯ್ತಿ ಮಿತಿ ಹೆಚ್ಚಳವೂ ಸೇರಬಹುದು ಎಂದು ಇವೈ ಅಭಿಪ್ರಾಯಪಟ್ಟಿದೆ. ಚೀನಾ ಮಾರುಕಟ್ಟೆಯ ಪ್ರಭಾವಕ್ಕೆ ಬ್ರೇಕ್ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಚೀನಾಗೆ ಸವಾಲೆಸೆಯಲು ಭಾರತ ಕಾರ್ಯತಂತ್ರ ರೂಪಿಸಿದೆ.

ಅದಕ್ಕಾಗಿ ರು.100 ಕೋಟಿ ಮೀಸಲು ನಿಧಿ ತೆಗೆದಿಡಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಣದ ಮೂಲಕ ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂಗಳಲ್ಲಿ ನಮ್ಮ ಸರ್ಕಾರ ಭೂಮಿ ಖರೀದಿಸಿ, ಅಲ್ಲಿ ನಮ್ಮ ದೇಶದ ಉದ್ದಿಮೆಗಳನ್ನು ತೆರೆಯುವುದು ಸರ್ಕಾರದ ಉದ್ದೇಶ. ಉದಾಹರಣೆಗೆ ಮ್ಯಾನ್ಮಾರ್‍ನಲ್ಲಿ ವಿಶೇಷ ಆರ್ಥಿಕ ವಲಯದ ಅಗತ್ಯವಿದ್ದಾಗ, ಅಲ್ಲಿ ಹಣ ತೊಡಗಿಸಿ ಭೂಮಿ ಖರೀದಿಸಿ, ಅದನ್ನು ವಿಶೇಷ ಆರ್ಥಿಕ ವಲಯವನ್ನಾಗಿ ರೂಪಿಸುವುದು ಮತ್ತು ಆ ನಿವೇಶನವನ್ನು ಭಾರತೀಯ ಉತ್ಪಾದಕರಿಗೆ ನೀಡಿ, ವೆಚ್ಚದ ಹಣವನ್ನು ಮತ್ತೆ ಪಡೆಯುವುದು.

ಸರ್ವಶಿಕ್ಷಾ ಅಭಿಯಾನ, ಉದ್ಯೋಗ ಖಾತ್ರಿಗೆ ಕತ್ತರಿ ಬಜೆಟ್‍ನಲ್ಲಿ ಸಾಮಾಜಿಕ ವಲಯದ ವೆಚ್ಚಕ್ಕೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಕಾಯ್ದೆ ಮತ್ತು ಸರ್ವ ಶಿಕ್ಷಾ ಅಭಿಯಾನಕ್ಕೆ ನೀಡಲಾಗುವ ಹಣವನ್ನು ಸರ್ಕಾರ ಕಡಿತ ಮಾಡುವ ಸಾಧ್ಯತೆಯಿದೆ. ಸದ್ಯಕ್ಕೆ ಉದ್ಯೋಗ ಖಾತ್ರಿಗಾಗಿ ಬರೋಬ್ಬರಿ ರು.34 ಸಾವಿರ ಕೋಟಿ ಮೀಸಲಿಡಲಾಗುತ್ತಿದೆ.

ಇದನ್ನು ಕಡಿತಗೊಳಿಸುವುದು ಸರ್ಕಾರದ ಯೋಚನೆ. ಆದರೆ ದಿನಗೂಲಿ ಮೊತ್ತವೂ ಹೆಚ್ಚಿರುವ ಕಾರಣ, ರಾಜ್ಯ ಸರ್ಕಾರಗಳು ಸಾಕಷ್ಟು ಹಣದ ಕೊರತೆ ಎದುರಿಸುವುದರಿಂದ ಈ ಬಾರಿ ಹೆಚ್ಚಿನ ಅನುದಾನ ನೀಡಬೇಕಾದ್ದು ಅಗತ್ಯ ಎಂದು ಪ್ರತಿಪಕ್ಷಗಳು ಹಾಗೂ ಹೋರಾಟಗಾರರ ಆಗ್ರಹ. ಇನ್ನೊಂದೆಡೆ, ಎಲ್ಲ ಮಕ್ಕಳಿಗೂ ಸಾರ್ವತ್ರಿಕ ಶಿಕ್ಷಣ ನೀಡುವ ಸರ್ವಶಿಕ್ಷಾ ಅಭಿಯಾನದ ಅನುದಾನದ ಮೊತ್ತ ಕಡಿತ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಈಗ ಸಿಗುತ್ತಿರುವ ಅನುದಾನ ಶಿಕ್ಷಕರ ವೇತನ ಮತ್ತು ಮೂಲಸೌಕರ್ಯಕ್ಕೇ ಸಾಲುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com