ಕಾರ್ಪೋರೇಟ್ ಬೇಹು: 2ನೇ ಎಫ್ಐಆರ್ ದಾಖಲು
ನವದೆಹಲಿ: ಕಾರ್ಪೋರೇಟ್ ಬೇಹುಗಾರಿಕೆ ಹಗರಣ ದಿನಕ್ಕೊಂದು ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ.
ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯದ ಮಾಹಿತಿ ಸೋರಿಕೆಗೆ ಸಂಬಂಧಿಸಿ ದೆಹಲಿ ಕ್ರೈಂ ಬ್ರಾಂಚ್ ಸೋಮವಾರ 2ನೇ ಎಫ್ಐಆರ್ ದಾಖಲಿಸಿದೆ. ಜತೆಗೆ, ಸೋರಿಕೆಯಾದ ದಾಖಲೆ ಪಡೆದ ಆರೋಪದಲ್ಲಿ ಎನರ್ಜಿ ಕನ್ಸಲ್ಟೆಂಟ್ ಲೋಕೇಶ್ ಎಂಬಾತನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 13ಕ್ಕೇರಿದೆ.
ಇದೇ ವೇಳೆ, ಪೊಲೀಸರು ಖಾಲಿ ಪೇಪರ್ಗೆ ನನ್ನ ಸಹಿ ಹಾಕಿಸಿಕೊಂಡಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂದೇ ನನಗೆ ಗೊತ್ತಾಗುತ್ತಿಲ್ಲ' ಎಂದು ಆರೋಪಿಗಳಲ್ಲಿ ಒಬ್ಬರಾದ ಮಾಜಿ ಪತ್ರಕರ್ತ ಶಂತನು ಸೈಕಿಯಾ ಆರೋಪಿಸಿದ್ದಾರೆ. ಸೋಮವಾರ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
ಕಚೇರಿಗೆ ಬೆಂಕಿ: ಏತನ್ಮಧ್ಯೆ, ಹಗರಣ ಆರೋಪದಲ್ಲಿ ಎನರ್ಜಿ ಕನ್ಸಲ್ಟೆಂಟ್ ಪ್ರಯಾಸ್ ಜೈನ್ ಅವರನ್ನು ಬಂಧಿಸಿದ ದಿನದಂದೇ ಅವರ ಕಚೇರಿಗೆ ಬೆಂಕಿ ಹತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾ ಗಿದೆ. ಇದರ ಹಿಂದೆ ಕಚೇರಿಯಲ್ಲಿದ್ದ ರಹಸ್ಯ ದಾಖಲೆಗಳನ್ನು ನಾಶ ಮಾಡುವ ಉದ್ದೇಶವಿತ್ತೇ ಎಂಬ ಸಂದೇಹ ಮೂಡಿದೆ. ಜೈನ್ ಬಂಧನವಾದ ಸ್ವಲ್ಪ ಹೊತ್ತಲ್ಲೇ ಕಚೇರಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂದು ಮೆಟಿಸ್ ಎನರ್ಜಿ ಸಂಸ್ಥೆ ತಿಳಿಸಿತ್ತು.
ಕೇಂದ್ರಕ್ಕೆ ವರದಿ: ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಸೋಮವಾರವೇ ಈ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ