ಬೆಂಗಳೂರು: ಕೆಪಿಎಸ್ಸಿ ನೇಮಕ ವಿಚಾರದಲ್ಲಿ ರಾಜ್ಯಪಾಲ ಜತೆ ಸರ್ಕಾರ ಕುಸ್ತಿಗೆ ಬೀಳುವ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ. ಈ ವಿಚಾರದಲ್ಲಿ ರಾಜ್ಯಪಾಲರು ಸರ್ಕಾರದಿಂದ ಕೋರಿರುವ ಸ್ಪಷ್ಟನೆ ಕೇವಲ ಸಲಹಾತ್ಮಕವೇ ಹೊರತು ಕಡ್ಡಾಯವಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ರಾಜ್ಯ ಸರ್ಕಾರ ಸಂವಿಧಾನದ 316ನೇ ವಿಧಿಯಲ್ಲಿ ಲೋಕಸೇವಾ ಆಯೋಗದ ಸದಸ್ಯರ ನೇಮಕಕ್ಕೆ ಇರುವ ನಿಯಮಾವಳಿಗಳನ್ನು ಅಸ್ತ್ರವಾಗಿಟ್ಟುಕೊಂಡು ರಾಜ ಭವನದೊಂದಿಗೆ ಕಾದಾಟಕ್ಕೆ ಸಿದ್ಧವಾಗಿದೆ.
ಈ ಪ್ರಕ್ರಿಯೆಯನ್ನು ಆಡಳಿತಾತ್ಮಕವಾಗಿಯೇ ನಡೆಸಲು ಮುಂದಾಗಿರುವ ಸರ್ಕಾರ, ಮುಖ್ಯ ಕಾರ್ಯದರ್ಶಿಗಳ ಕಚೇರಿ ಮೂಲಕವೇ ಪತ್ರ ವ್ಯವಹಾರ ನಡೆಸಿ ಶಿಷ್ಟಾಚಾರದ ನೆರಳಲ್ಲಿ ರಾಜಕಾರಣ ನಡೆಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸ್ಪಷ್ಟನೆ ಕೋರಿ ಕಳುಹಿಸಿದ್ದ ಪತ್ರಕ್ಕೆ ಶನಿವಾರವೇ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಉತ್ತರ ಕಳುಹಿಸಿದ್ದಾರೆ. ಈ ಹಿಂದೆ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅಂದು ಅಧಿಕಾರದಲ್ಲಿದ್ದ ಸರ್ಕಾರಕ್ಕೆ ಬರೆದಿದ್ದರು ಎನ್ನಲಾಗದ ಪತ್ರದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪ್ರಸ್ತಾಪಿಸಿರುವ ರಾಜ್ಯಪಾಲ ವಾಜುಭಾಯ್ ರೂಡಾಭಾಯ್ ವಾಲಾ ನೌಕರೇತರರ ನೇಮಕ ಸಂದರ್ಭದ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಕೋರಿದ್ದರು. ಇದಕ್ಕೆ ಉತ್ತರ ಸಿದ್ಧಪಡಿಸಿರುವ ಸರ್ಕಾರ ಪ್ರತಿಯೊಂದು ನೇಮಕದಲ್ಲಿಯೂ ಆಂತರಿಕ ವಿಚಕ್ಷಣಾದಳದ ಮೂಲಕ ಸರ್ಕಾರ ವರದಿ ತರಿಸಿಕೊಳ್ಳುತ್ತದೆ ಎಂದು ತಿಳಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿರುವ ವಿ.ಆರ್.ಸುದರ್ಶನ್ ನವೆಂಬರ್ನಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದು, ಅದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಆದರೆ ರಾಜಿನಾಮೆ ಅಂಗೀಕಾರ ಪತ್ರವನ್ನು ಮಾತ್ರ ಕಳುಹಿಸಿರಲಿಲ್ಲ.
ಸ್ಪಷ್ಟನೆ ನಂತರವೂ ನಿರಾಕರಿಸಿದರೆ?
ಸದ್ಯಕ್ಕೆ ರಾಜ್ಯಪಾಲರು ಕೇಳಿದ ಸ್ಪಷ್ಟೀಕರಣಕ್ಕೆ ಸರ್ಕಾರ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಉತ್ತರ ನೀಡಿದೆ. ಆದರೆ ಇದಕ್ಕೂ ಅವರು ಒಪ್ಪದೇ ಪಟ್ಟಿಯನ್ನು ವಾಪಾಸ್ ಕಳಿಸಿದಾಗ ಏನು ಮಾಡಬೇಕೆಂಬ ರಾಜಕೀಯ ನಡೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮೊದನೆಯದಾಗಿ ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟ ಅಂಶದ ಪ್ರಕಾರ ಲೋಕಸೇವಾ ಸಂಸ್ಥೆಗಳಿಗೆ ಶೇ.50ರಷ್ಟು ನೌಕರೇತರರನ್ನು ನೇಮಿಸಲು ಅವಕಾಶವಿದೆ.
ಎರಡನೆಯದಾಗಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಈ ಸಂಬಂಧ ಕಾನೂನು ರೂಪಿಸಿ ಎಂದು ಹೇಳಿಲ್ಲ. ಹೀಗಾಗಿ ಸಂವಿಧಾನದ 141ನೇ ವಿಧಿ ಪ್ರಕರ ಈ ತೀರ್ಪು ದೇಶವ್ಯಾಪ್ತಿ ಜಾರಿಗೆ ಬರಲೇಬೇಕಾದ ನಿಯಮವಾಗುವುದಿಲ್ಲ ಎಂಬುದು ಸರ್ಕಾರದ ವಾದ.
ಈ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಪಾಲರಿಗೆ ಸ್ಪಷ್ಟನೆ ರವಾನಿಸಿದೆ. ಇದಕ್ಕೂ ಹೊರತುಪಡಿಸಿ ಅವರು ಶಿಫಾರಸ್ಸನ್ನು ವಾಪಾಸ್ ಕಳುಹಿಸುವುದಕ್ಕೆ ಸಾಧ್ಯವಿಲ್ಲ. ವಿಧೇಯಕಗಳನ್ನಾದರೆ ಎರಡನೇ ಬಾರಿ ಸರ್ಕಾರ ರಾಜ್ಯಪಾಲರ ಅಂಗಳಕ್ಕೆ ಕಳುಹಿಸಿದಾಗ ಒಪ್ಪುವುದು ಅನಿವಾರ್ಯ. ಆದರೆ ನೇಮಕದಲ್ಲಿ ಇಂಥ ಸಂಪ್ರದಾಯವಿಲ್ಲ. ಹೀಗಾಗಿ ಮುಂದೆ ಯಾವ ರೀತಿ ವರ್ತಿಸಬೇಕು? ಅಥವಾ ರಾಜ್ಯಪಾಲರು ಹೇಳುವ ಒಂದೆರಡು ಹೆಸರು ಕೈ ಬಿಟ್ಟು ಹೊಸ ಪ್ರಸ್ತಾವನೆ ಕಳುಹಿಸಬಹುದೇ? ಎಂಬ ಕುತೂಹಲ ಮಾತ್ರ ಉಳಿದಿದೆ.
Advertisement