ಪುಣೆ: 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ದೋಷಿಯಾಗಿರುವ ಬಾಲಿವುಟ್ ನಟ ಸಂಜಯ್ದತ್ ಸಲ್ಲಿಸಿರುವ ಪರೋಲ್ ಅವಧಿ ವಿಸ್ತರಣಾ ಅರ್ಜಿ ವಜಾಗೊಂಡಿದ್ದು, ಕೂಡಲೇ ಶರಣಾಗುವಂತೆ ಯರವಾಡ ಜೈಲಿನ ಪ್ರಾಧೀಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಪರೋಲ್ನಲ್ಲಿರುವ ಸಂಜುಬಾಬಾ, ಅನಾರೋಗ್ಯದ ನೆಪವೊಡ್ಡಿ, ತಮ್ಮ ಪರೋಲ್ ಅವಧಿ ಮತ್ತೆ 2 ವಾರಗಳ ಕಾಲ ವಿಸ್ತರಿಸುವಂತೆ ಅರ್ಜಿ ಸಲ್ಲಿಸಿದ್ದರು. ಪುಣೆ ಜೈಲಿನ ಅಧಿಕಾರಿಗಳು ಹಾಗೂ ಮುಂಬೈ ಪೊಲೀಸರ ನಡುವಿನ ಕೆಲ ಗೊಂದಲಗಳಿಂದಾಗಿ, ಪರೋಲ್ ಅವಧಿ ಮುಗಿದಿದ್ದರೂ, ಸಂಜಯ್ ಇನ್ನು ತಮ್ಮ ನಿವಾಸದಲ್ಲೇ ಕಾಲ ಕಳೆಯುತ್ತಿದ್ದಾರೆ.
ಯರವಾಡ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ಜೈಲಿನೊಳಗಿರುವ ಕಾಲಕ್ಕಿಂತ ಪೆರೋಲ್ ಮೂಲಕ ಹೊರಗಡೆ ಕಾಲ ಕಳೆಯುತ್ತಿರುವುದೇ ಹೆಚ್ಚು. ಕಳೆದ ಡಿ.24ರಂದು 14 ದಿನಗಳ ಪೆರೋಲ್ ಹಿನ್ನೆಲೆಯಲ್ಲಿ ಯರವಾಡ ಜೈಲಿನಿಂದ ಸಂಜಯ್ ಬಿಡುಗಡೆಯಾಗಿದ್ದರು.
ಪೆರೋಲ್ ಅವಧಿ ಮುಗಿಯುತ್ತಿದ್ದಂತೆ, ಮತ್ತೆ 2 ವಾರಗಳ ಕಾಲ ಪೆರೋಲ್ ಅವಧಿ ವಿಸ್ತರಿಸಲು ಸಂಜಯ್ ದತ್ ಅರ್ಜಿ ಸಲ್ಲಿಸಿದ್ದರು. ಯರವಾಡ ಜೈಲಿನ ಅಧಿಕಾರಿಗಳು ಹಾಗೂ ಮುಂಬೈ ಪೊಲೀಸರ ನಡುವಿನ ಗೊಂದಲಗಳಿಂದಾಗಿ ಸಂಜಯ್ದತ್ನ ಪರೋಲ್ ಅವಧಿ ಮುಕ್ತಾಯಗೊಂಡಿದ್ದರೂ, ಸಂಜಯ್ನನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಇಂದು ಸ್ಪಷ್ಟ ನಿರ್ಧಾರ ಕೈಗೊಂಡಿರುವ ಯರವಾಡ ಜೈಲಿನ ಅಧಿಕಾರಿಗಳು, ಸಂಜಯ್ದತ್ ಪರೋಲ್ ಅವಧಿ ವಿಸ್ತರಣಾ ಅರ್ಜಿಯನ್ನು ವಜಾಗೊಳಿಸಿ, ಕೂಡಲೇ ಶರಣಾತಿಯಾಗುವಂತೆ ಆದೇಶ ಹೊರಡಿಸಿದ್ದಾರೆ.
Advertisement