ನವದೆಹಲಿ: ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರತಿದಿನ ಒಬ್ಬರಂತೆ ಗಣ್ಯರಿಗೆ ವೈಯಕ್ತಿಕವಾಗಿ ಕರೆ ಮಾಡಿ, ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಲಿಂಡರ್ ಖರೀದಿಸುವುದನ್ನು ಬಿಟ್ಟುಬಿಡಿ ಎಂದು ಕೋರುತ್ತಿದ್ದಾರೆ.
ಬಡವರಿಗೆ ಅಂದರೆ ಯಾರಿಗೆ ಅಗತ್ಯವಿದೆಯೋ ಅವರಿಗೆ ಎಲ್ಪಿಜಿ ಸಬ್ಸಿಡಿ ಸಿಗುವಂತೆ ಮಾಡುವುದು ಪ್ರಧಾನ್ ಅವರ ಉದ್ದೇಶ. ಹೀಗಾಗಿ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ತಮ್ಮ ಎಲ್ಪಿಜಿ ಸಂಪರ್ಕವನ್ನು ಕಡಿತಗೊಳಿಸಿ, ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಲು ಆರಂಭಿಸಿದ್ದಾರೆ.
ಕೋರಿಕೆಗೆ ಮಣಿದ ಜೇಟ್ಲಿ, ರೋಹಟಗಿ
ಸಬ್ಸಿಡಿ ಸಹಿತ ಎಲ್ಪಿಜಿ ಬಳಕೆ ನಿಲ್ಲಿಸಿ ಎಂಬ ಸಚಿವ ಪ್ರಧಾನ್ ಅವರ ಕೋರಿಕೆಗೆ ಅರುಣ್ ಜೇಟ್ಲಿ ಮಣಿದಿದ್ದು, ತಮ್ಮ ಸಿಲಿಂಡರ್ ಅನ್ನು ಸರೆಂಡರ್ ಮಾಡಿದ್ದಾರೆ. ಇದೇ ವೇಳೆ, ಶನಿವಾರ ಆಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರೂ ಇದೇ ಕೆಲಸವನ್ನು ಸ್ವಯಂಪ್ರೇರಿತರಾಗಿ ಮಾಡಿದ್ದಾರೆ.
ಮಾರುಕಟ್ಟೆದರದಲ್ಲಿ ಎಲ್ಪಿಜಿ ಖರೀದಿಸಲು ಸಾಧ್ಯವಿರುವ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ಎಲ್ಪಿಜಿ ಸಂಪರ್ಕ ತೆಗೆಸಬೇಕು. ನಾನು ಪ್ರತಿ ದಿನ ಒಬ್ಬೊಬ್ಬ ವಿಐಪಿಗೆ ಕರೆ ಮಾಡಿ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶನಿವಾರ ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ರಿಗೆ ಕರೆ ಮಾಡಿ ಇದೇ ಕೋರಿಕೆ ಸಲ್ಲಿಸಿದ್ದೇನೆ ಎಂದಿದ್ದಾರೆ ಸಚಿವ ಪ್ರಧಾನ್.
Advertisement