ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಂದಿನ ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ವಾಪಸ್ ಕರೆ ತರುವಂತೆ ಹೈಕೋರ್ಟ್ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ.
ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆಂಬ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್. ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರ ವಿಭಾಗೀಯ ಪೀಠ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಾಪಸ್ ಕರೆತರುವ ಸಲುವಾಗಿ ರಾಜ್ಯ ಮಟ್ಟದಲ್ಲಿ ನಿರ್ವಹಣಾ ಕೇಂದ್ರ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಸಲಹೆ ನೀಡಿದೆ.
ರಾಜ್ಯ ಸರ್ಕಾರ ಆರಂಭಿಸಿರುವ ಹಾಜರಿ ಪ್ರಾಧಿಕಾರದ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸಿ ದಿನಂಪ್ರತಿ ಮಕ್ಕಳ ಹಾಜರಿ ವರದಿಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಅತಿ ಬಡವರು ಹಾಗೂ ಹಿಂದುಳಿದ ವರ್ಗದವರನ್ನು ಶಾಲೆಗೆ ವಾಪಸ್ ಕರೆತರಲು ಸರ್ಕಾರ ಕಾರ್ಯ ಪ್ರವೃತ್ತವಾಗಬೇಕು.
ಶಾಲಾ ಮಕ್ಕಳಿಗೆ ಉತ್ತಮ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕ್ರೀಡಾ ಸಾಮಾಗ್ರಿಗಳನ್ನು ನೀಡುವ ಮೂಲಕ ಮಕ್ಕಳು ಶಾಲೆಗೆ ಮರಳುವಂತೆ ಪ್ರೋತ್ಸಾಹಿಸಬೇಕು. ಶಾಲೆಯಿಂದ ಹೊರಗುಳಿಯಲು ಪ್ರಾದೇಶಿಕವಾರು ಬೇರೆ ಕಾರಣಗಳಿದ್ದು ಅವರನ್ನು ಮರಳಿ ಶಾಲೆಗೆ ಕರೆತರಲು ತಳ ಮಟ್ಟದಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಂಬಂಧಪಟ್ಟ ಆಂತರಿಕ ಇಲಾಖೆಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಬೇಕಿದೆ ಎಂದು ಪೀಠ ಸಲಹೆ ನೀಡಿದೆ.
ರಾಜ್ಯದಲ್ಲಿ ಸದ್ಯ 17 ಸಾವಿರ ಮಕ್ಕಳು ಮಾತ್ರ ಹೊರಗುಳಿದಿದ್ದು ಇಲಾಖೆ ಅವರನ್ನು ವಾಪಸ್ ಕರೆತರಲು ಸಕಲ ರೀತಿಯಲ್ಲಿಯೂ ಯತ್ನಿಸುತ್ತಿರುವುದಾಗಿ ಸರ್ಕಾರಿ ವಕೀಲರು ಪೀಠದ ಗಮನಕ್ಕೆ ತಂದರು.
ಅಲ್ಲದೇ ಮಕ್ಕಳ ಮಾಹಿತಿಯನ್ನು ಒಳಗೊಂಡ 'ವಿದ್ಯಾ ವಾಹಿನಿ' ಎಂಬ ನೂತನ ಸಾಫ್ಟ್ವೇರ್ ಅನ್ನು ಸರ್ಕಾರ ಪರಿಚಯಿಸುತ್ತಿದ್ದು ಶಾಲೆಯಿಂದ ಹೊರಗುಳಿದ ಹಾಗೂ ವಾಪಸ್ ಕರೆತರಲು ಸಕಲ ರೀತಿಯಲ್ಲಿಯೂ ಯತ್ನಿಸುತ್ತಿರುವುದಾಗಿ ಸರ್ಕಾರಿ ವಕೀಲರು ಪೀಠದ ಗಮನಕ್ಕೆ ತಂದರು.
ಅಲ್ಲದೇ ಮಕ್ಕಳ ಮಾಹಿತಿಯನ್ನು ಒಳಗೊಂಡ 'ವಿದ್ಯಾ ವಾಹಿನಿ' ಎಂಬ ನೂತನ ಸಾಫ್ಟ್ವೇರ್ ಅನ್ನು ಸರ್ಕಾರ ಪರಿಚಯಿಸುತ್ತಿದ್ದು ಶಾಲೆಯಿಂದ ಹೊರಗುಳಿದ ಹಾಗೂ ವಾಪಸ್ ಕರೆತಂದಿರುವ ಮಕ್ಕಳ ಸಮಗ್ರ ವಿವರವನ್ನು ಅದರಲ್ಲಿ ಅಡಕ ಮಾಡುವುದಾಗಿ ಸರ್ಕಾರ ಪೀಠಕ್ಕೆ ತಿಳಿಸಿದೆ.
ಶಾಲೆಯಿಂದ ಹೊರಗುಳಿದ ಹಾಗೂ ವಾಪಸ್ ಕರೆ ತಂದಿರುವ ಮಕ್ಕಳ ಅಂಕಿ ಅಂಶಗಳ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮಾರ್ಚ್ 2 ಕ್ಕೆ ಮುಂದೂಡಿದೆ.
Advertisement