ಹಲ್ಲೆ ನಡೆಸಿ 4 ಲಕ್ಷ ಲೂಟಿ

ಹಾರ್ಡ್‌ವೇರ್ ಮಳಿಗೆ ಮಾಲೀಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಬ್ಬರು 4 ಲಕ್ಷ ನಗದು ದರೋಡೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಾರ್ಡ್‌ವೇರ್ ಮಳಿಗೆ ಮಾಲೀಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಬ್ಬರು 4 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಹಾಡಹಗಲೇ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.

ಅಗ್ರಹಾರ ದಾಸರಹಳ್ಳಿ ನಿವಾಸಿ ಸತ್ಯ ನಾರಾಯಣ (65) ದರೋಡೆಗೆ ಒಳಗಾದವರು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಸತ್ಯನಾರಾಯಣ್ ಬೆಳಿಗ್ಗೆ 11.30ಕ್ಕೆ ಬ್ಯಾಂಕ್‌ನಿಂದ 4 ಲಕ್ಷ ಹಣ ಡ್ರಾ ಮಾಡಿ ಅಂಗಡಿಯಲ್ಲಿ ತಂದಿಟ್ಟುಕೊಂಡಿದ್ದರು. ಮಧ್ಯಾಹ್ನ 1.30ರ ಹೊತ್ತಿಗೆ ಊಟಕ್ಕೆ ಮನೆಗೆ ಹೋಗುವಾಗ ಆ ಹಣವನ್ನು ಪೇಪರಲ್ಲಿ ಸುತ್ತಿಕೊಂಡು ತಮ್ಮ ಬೈಕ್‌ನ ಮುಂಭಾಗ (ಪೆಟ್ರೋಲ್ ಟ್ಯಾಂಕ್) ಮೇಲೆ ಇಟ್ಟುಕೊಂಡಿದ್ದರು. ಅವರು ಅಂಗಡಿಯಿಂದ ಹೊರಟಾಗಿನಿಂದಲೇ ಬೈಕ್‌ನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳು ಕಾವೇರಿ ಚಿತ್ರಮಂದಿರದ ಬಳಿ ಅಡ್ಡಗಟ್ಟಿ ಹಣ ದೋಚಲು ಯತ್ನಿಸಿದರು. ಸತ್ಯ ನಾರಾಯಣ್ ವಿರೋಧಿಸಿದಾಗ ದುಷ್ಕರ್ಮಿಗಳು ಹಲ್ಲೆ ಮಾಡಿ, ಬೈಕ್‌ನಿಂದ ಕೆಳಗೆ ತಳ್ಳಿ ಹಣ ದೋಚಿ ಪರಾರಿಯಾಗಿದ್ದಾರೆ.

ಕ್ಯಾಮೆರಾದಲ್ಲಿ ಸುಳಿವು

ತನ್ನನ್ನು ಹಿಂಬಾಲಿಸಿ ಬಂದವರು ಹಸಿರು ಬಣ್ಣದ ಬೈಕ್‌ನಲ್ಲಿ ಬಂದಿದ್ದರು. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸಿದ್ದ. ಈ ಹಿಂದೆ ಆರೋಪಿಗಳನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಸತ್ಯ ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ನಡೆದ ಸುತ್ತಮುತ್ತ ರಸ್ತೆಗಳ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಕ್ಯಾಮೆರಾದಲ್ಲಿ ಆರೋಪಿಗಳ ಮುಖ ಅಸ್ಪಷ್ಟವಾಗಿ ಕಾಣುತ್ತಿದ್ದು, ದೃಶ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಫೋಟೋ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com