ಬೆಂಗಳೂರು: ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳಿಗೆ ಎದೆಗುಂದದೆ ಅವುಗಳನ್ನು ಮೆಟ್ಟಿ ಗುರಿ ಮುಟ್ಟಬೇಕೆಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಹುರಿದುಂಬಿಸಿದರು.
ಯುನೈಟೆಡ್ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಸೋಮವಾರ ಮಾತನಾಡಿ, ಶಿಕ್ಷಣ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಪ್ರತಿಯೊಬ್ಬರೂ ವಿಶಿಷ್ಟರು ಎಂಬುದನ್ನು ಮನಗಂಡು ಕ್ರಿಯಾಶೀಲತೆ ಮೈ ಗೂಡಿಸಿಕೊಳ್ಳಬೇಕು. ಗುರಿಮುಟ್ಟಲು ನಿರಂತರ ಜ್ಞಾನ ಗಳಿಕೆಯತ್ತ ಉತ್ಸುಕರಾಗಿರಬೇಕು. ಸಮಸ್ಯೆಗಳನ್ನು ಬದಿಗೆ ಸರಿಸಿ ಗುರಿ ಮುಟ್ಟಬೇಕು.
ಅದಕ್ಕಾಗಿ ಶಿಸ್ತು ಮತ್ತು ಶ್ರಮವಹಿಸಿ ಗುರಿಯತ್ತ ಹೆಜ್ಜೆ ಹಾಕಿದರೆ ಒಂದಲ್ಲ ಒಂದು ದಿನ ಗುರಿ ಮುಟ್ಟುವುದರಲ್ಲಿ ಸಂಶಯವಿಲ್ಲ ಎಂದು ತಿಳಿ ಹೇಳಿದರು.
ಕುಟುಂಬದಲ್ಲಿ ಜ್ಞಾನಾರ್ಜನೆಗಾಗಿ ಸಣ್ಣ ಲೈಬ್ರರಿಯನ್ನು ಹೊಂದಿರುವ ಪರಿಪಾಠ ಬೆಳೆಸಿಕೊಳ್ಳಬೇಕು. ತಾವು ಓದಿ ತಿಳಿದುಕೊಂಡಿದ್ದನ್ನು ಸ್ನೇಹಿತರ ವಲಯದಲ್ಲಿ ಹಂಚಿಕೊಂಡು ವಿಶ್ಲೇಷಿಸಬೇಕು. ಪ್ರತಿಯೊಬ್ಬರ ಸಾಧನೆಗೆ ಆಧ್ಯಾತ್ಮಿಕ ವಾತಾವರಣವೂ ಪೂರಕವಾಗಿರುತ್ತದೆ. ಆದ್ದರಿಂದ ಮನೆಯಲ್ಲಿ ಪ್ರಾರ್ಥನೆಗಾಗಿ ಪ್ರತ್ಯೇಕ ಸ್ಥಳವನ್ನು ಇರಿಸಬೇಕು. ಜತೆಗೆ ಮಕ್ಕಳು ತಾಯಿಯನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಮಕ್ಕಳೊಂದಿಗೆ ಮನ ತೆರೆದ ಕಲಾಂ
ಶಾಳೆಯಲ್ಲಿ ಮಕ್ಕಳ ಮೇಲೆ ಶಿಕ್ಷಕರ ಪ್ರಭಾವ ಹೆಚ್ಚಿರುತ್ತದೆ. ಶಿಕ್ಷಕರು ಅವರನ್ನು ಹುರಿದುಂಬಿಸಬೇಕು. ರಾಮೇಶ್ವರದಲ್ಲಿ ನನಗೆ ಶಿಕ್ಷಕರಾಗಿ ಶಿವ ಸುಬ್ರಮಣ್ಯಂ ಅಯ್ಯರ್ ಎಂಬುವರಿದ್ದರು. ಅವರು ತರಗತಿಗೆ ಬಂದರೆ ಒಂದು ಕಳೆ ಇರುತ್ತಿತ್ತು ಅಂದರೆ ಅಪಾರವಾದ ಜ್ಞಾನವುಳ್ಳ ವ್ಯಕ್ತಿಯಾಗಿದ್ದರು. ಅವರು ನನ್ನ ಮೇಲೆ ಪ್ರಭಾವ ಬೀರಿದ್ದರಿಂದ ಭೌತಶಾಸ್ತ್ರ ಕಲಿತು ಏರೋನಾಟಿಕಲ್ ಎಂಜಿನಿಯರ್ ಆದೆ ಎಂದು ತಮ್ಮ ಜೀವನದ ಮಧುರ ಕ್ಷಣಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.
Advertisement