ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲುವು ಭಾರತೀಯತೆಯ ಗೆಲವು ಎಂದಿದ್ದ ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ದನ್ ದ್ವಿವೇದಿ ಅವರನ್ನು ಕಾಂಗ್ರೆಸ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ಅಜಯ್ ಮಾಕೇನ್ ಅವರು, ದ್ವಿವೇದಿ ಅವರ ಹೇಳಿಕೆಯನ್ನು ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು ಭಾರತೀಯತೆಯ ಗೆಲುವು ಎಂದು ದ್ವಿವೇದಿ ಇತ್ತಿಚೀಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ದ್ವಿವೇದಿ ಹೇಳಿಕೆ ವೈಯಕ್ತಿಕ, ಅದು ಪಕ್ಷದ ದೃಷ್ಟಿಕೋನ ಅಲ್ಲ ಎಂದು ಮಾಕೇನ್ ಸ್ಪಷ್ಟಪಡಿಸಿದ್ದಾರೆ.
ಸ್ವಾಮಿ ವಿವೇಕಾನಂದ ಮತ್ತು ಇಂದಿರಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ ಮಾಕೇನ್, ನರೇಂದ್ರ ಮೋದಿ ಅವರು ಯಾವತ್ತು ಭಾರತೀಯತೆಯ ಸಂಕೇತ ಆಗಲು ಸಾಧ್ಯವಿಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ಜರ್ನಾದನ್ ದ್ವಿವೇದಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಮಾಕೇನ್, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜನಾರ್ದನ್ ದ್ವಿವೇದಿ, ನಾನು ಮೋದಿ ಅವರನ್ನು ಹೊಗಳಿಲ್ಲ ಮತ್ತು ಅವರು ಭಾರತೀಯತೆಯ ಸಂಕೇತ ಎಂದು ಯಾವುತ್ತು ಹೇಳಿಲ್ಲ ಎಂದ್ದಿದಾರೆ.
Advertisement