ಏನಿದು ವ್ಯಾಪಂ ಹಗರಣ?

ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣ ಇದೀಗ ರಾಷ್ಟ್ರ ವ್ಯಾಪ್ತಿ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಆದರೆ ಇದರ ಹಿಂದಿರುವ ರಹಸ್ಯ ಮಾತ್ರ...
ವ್ಯಾಪಂ
ವ್ಯಾಪಂ
Updated on

ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣ ಇದೀಗ ರಾಷ್ಟ್ರ ವ್ಯಾಪ್ತಿ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಆದರೆ ಇದರ ಹಿಂದಿರುವ ರಹಸ್ಯ ಮಾತ್ರ ಯಾರ ಕಲ್ಪನೆಗೂ ನಿಲುಕದ್ದಾಗಿದೆ. ಸಾಲು ಸಾಲು ನಿಗೂಢ, ಅಸಹಜ ಸಾವುಗಳು ವ್ಯಾಪಂ ಹಗರಣದ ತೀವ್ರತೆಗೆ ತೋರಿಸುತ್ತದೆ.

ವ್ಯಾಪಂ ಹಗರಣ ಸಂಬಂಧಿಸಿದಂತೆ ಇಲ್ಲಿಯವರೆಗೂ 47 ಮಂದಿ ಸಾವನ್ನಪ್ಪಿದ್ದಾರೆ. ಪ್ರಕರಣದ ಆರೋಪಿಗಳು, ಮಧ್ಯವರ್ತಿಗಳು, ಸಾಕ್ಷಿಗಳು, ವರದಿ ಮಾಡಲು ಹೋದ ಪತ್ರಕರ್ತ ಸೇರಿದಂತೆ ಅಸಹಜ ಸಾವುಗಳು ದೊಡ್ಡ ಪಟ್ಟಿಯೆ ಸಿಗುತ್ತದೆ. ವ್ಯಾಪಂ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಕಳೆದ ತಿಂಗಳು 2 ಸಾವಿರ ಮಂದಿಯನ್ನು ಬಂಧಿಸಿತ್ತು. ಹೀಗೆ ಎಫ್ಐಆರ್‌ನಲ್ಲಿ ಹೆಸರು ದಾಖಲಾದವರಲ್ಲಿ 25 ಮಂದಿ ಈಗಾಗಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೂ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದರೆ, 11 ಮಂದಿ ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇನ್ನು ಉಳಿದಂತೆ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ವ್ಯಾಪಂ’( Vyapam - Madhya Pradesh Vyavasayik Pariksha Mandal) ಹಗರಣ ಎಂದೇ ಕುಖ್ಯಾತಿ ಪಡೆದಿದೆ. ಈ ಹಗರಣದಿಂದಾಗಿ ಸಾವಿನ ಸರಣಿ ಮುಂದೂವರೆಯುತ್ತಿದೆ. ಹಗರಣದಲ್ಲ ದೊಡ್ಡ ದೊಡ್ಡವರ ಹೆಸರು ಕೇಳಿಬಂದಿದ್ದು, ದೊಡ್ಡ ಸಂಚಿನ ಭಾಗವಾಗಿಯೇ ಸಾಕ್ಷಿಗಳು ಮತ್ತು ಆರೋಪಿಗಳ ಧ್ವನಿ ಅಡಗಿಸಲಾಗುತ್ತಿದೆ ಎನ್ನುವ ದೂರುಗಳು ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿವೆ.

ವ್ಯಾಪಂ ಹಗರಣ?
ಮಧ್ಯಪ್ರದೇಶದ ವೃತ್ತಿಪರ ಶಿಕ್ಷಣ ಅಥವಾ ವ್ಯವಸಾಯಿಕ್ ಪರೀಕ್ಷಾ ಮಂಡಲ್(ವ್ಯಾಪಂ) ಮಧ್ಯಪ್ರದೇಶದ ಸ್ವಾಯತ್ತ ಸಂಸ್ಥೆಯಾಗಿದೆ. 1970ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸುತ್ತದೆ. ವೃತ್ತಿ ಶಿಕ್ಷಣ ಪ್ರವೇಶ, ವೈದ್ಯರು, ಕಾನ್‌ಸ್ಟೆಬಲ್, ಶಿಕ್ಷಕರು ಮತ್ತಿತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ಈ ಮಂಡಳಿ ನಡೆಸುತ್ತಿದೆ.

2013ರಲ್ಲಿ ಹಗರಣ ಬಯಲಿಗೆ
ವೈದ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಪರವಾಗಿ ಇನ್ನೊಬ್ಬರು ಭಾಗಿಯಾಗಿರುವುದನ್ನು ಗಮನಿಸಿದ ವೈದ್ಯರಾದ ಡಾ. ಆನಂದ್ ರಾಯ್ ಅವರು 2013ರಲ್ಲಿ ಈ ಹಗರಣವನ್ನು ಬಯಲು ಮಾಡಿದ್ದರು. ಅಲ್ಲಿಂದ ವ್ಯಾಪಂ ಸಂಬಂಧಪಟ್ಟಂತೆ ನಿಗೂಢ ಸಾವುಗಳು ಸರಣಿ ಶುರುವಾದವು.

ಆರೋಪಗಳು
ಸೀಟಿಗಾಗಿ ಪ್ರತಿಯೊಬ್ಬ ಅಭ್ಯರ್ಥಿಯಿಂದ ಲಕ್ಷಾಂತರ ರುಪಾಯಿ ಪಡೆಯಲಾಗಿದೆ. ಇದರಿಂದಾಗಿ ಮೆರಿಟ್ ಇಲ್ಲದಿದ್ದರೂ ಹಣವಿದ್ದವರಿಗೆ ವೃತ್ತಿಪರ ಕೋರ್ಸ್ ಗಳ ಸೀಟು ಬಿಕರಿಯಾಗಿವೆ ಎಂದು ಹೇಳಲಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯು ಈ ಹಗರಣದಲ್ಲಿ ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ ಶರ್ಮಾ ಸೇರಿದಂತೆ ರಾಜಕಾರಣಿಗಳು, ಹಿರಿಯ ಅಧಿಕಾರಿ ಗಳು, ಉದ್ಯಮಿಗಳು ಭಾಗಿಯಾಗಿದ್ದಾರೆ. ಇದರ ಹಿಂದೆ ದೊಡ್ಡ ದೊಡ್ಡವರ ಹೆಸರುಗಳು ಕೇಳಿಬರುತ್ತಿವೆ.

ಈ ಪ್ರಕರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತವರ ಪತ್ನಿ ಸಾಧನಾ ಸಿಂಗ್ ಹೆಸರು ತಳುಕು ಹಾಕಿಕೊಂಡಿದೆ. ರಾಜ್ಯಪಾಲ ರಾಮನರೇಶ್ ಯಾದವ್ ಹೆಸರೂ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಕುತೂಹಲ ಮೂಡಿಸಿದೆ. ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ್‌ ಶರ್ಮಾ, ಮಾಜಿ ಅಧಿಕಾರಿ ಓ.ಪಿ. ಶುಕ್ಲಾ, ಡಿಐಜಿ ಆರ್‌.ಕೆ ಶಿವಾರೆ. ಜೊತೆಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲ ಗಣ್ಯರ ಹೆಸರೂ ಈ ಕರಾಳ ದಂಧೆಯಲ್ಲಿ ಸಿಲುಕಿಕೊಂಡಿದೆ.

2004ರಿಂದಲೇ ಇಂತಹ ಅಕ್ರಮಗಳು ನಡೆಯುತ್ತಾ ಬಂದಿವೆ. ಆದರೆ ಡಾ. ಆನಂದ್ ರಾಯ್ ಅವರ ದೂರಿನ ಹಿನ್ನೆಲೆಯಲ್ಲಿ 2013ರ ಜುಲೈನಲ್ಲಿ ಇಂದೋರ್ ಪೊಲೀಸರು ಪ್ರಕರಣದ ಪ್ರಮುಖ ರೂವಾರಿ ಡಾ. ಜಗದೀಶ್‌ ಸಾಗರ್‌ನನ್ನು ಮುಂಬೈನಲ್ಲಿ ಬಂಧಿಸಿದ ನಂತರ ಹಗರಣವು ಹೆಚ್ಚು ಸುದ್ದಿಯಾಗಿತ್ತು. 100 ರಿಂದ 150 ಅನರ್ಹ ವೈದ್ಯರು ಅಕ್ರಮ ಮಾರ್ಗದಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗಿರುವುದಾಗಿ ಸಾಗರ್‌, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಅಸಹಜ ಸಾವುಗಳು?
* 2010ರಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಹಗರಣದ ಆರೋಪಿಗಳ ನೆರವಿನಿಂದ ಉತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿ ನರ್ಮತಾ ದಾಮೋರ್‌ಳ(19) ಶವ ರೈಲ್ವೆ ಹಳಿ ಬಳಿ ಪತ್ತೆಯಾಗಿತ್ತು.
* ಎಸ್ಐಟಿ ವಿಚಾರಣೆಗೆ ಗುರಿಪಡಿಸಬೇಕೆಂದಿದ್ದ ವಿದ್ಯಾರ್ಥಿ ತರುಣ್‌ ಮಾಚರ್‌ ಎಂಬಾತ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಆತನ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು ಇಲ್ಲಿಯವರೆಗೂ ಅಪರಿಚಿತ ವಾಹನವನ್ನು ಪತ್ತೆಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲ.
* ಮಧ್ಯಪ್ರದೇಶ ರಾಜ್ಯಪಾಲ ರಾಂ ನರೇಶ್ ಯಾದವ್ ಅವರ ಮಗ 50 ವರ್ಷದ ಶೈಲೇಶ್ ಅವರ ಸಾವು ಕೂಡ ಸೇರಿದೆ.
* ಮೃತ ನಮ್ರತಾಳ ಪೋಷಕರನ್ನು ಸಂದರ್ಶನ ಮಾಡಿದ್ದ ಅಕ್ಷಯ್ ಸಿಂಗ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
* ವ್ಯಾಪಂ ಪರೀಕ್ಷೆ ಮೂಲಕ ಎಸ್ ಐ ಆಗಿ ಆಯ್ಕೆಯಾಗಿದ್ದ ಎಸ್ ಐ ಅನಾಮಿಕ ಖುಶ್ವಾಹ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com