ನವದೆಹಲಿ: ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಏಕೆ ಸೇರ್ಪಡೆಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.
ಎಲ್ಲಾ ರಾಷ್ಟ್ರೀಯ ಪಕ್ಷಗಳು ಆರ್ ಟಿಐ ವ್ಯಾಪ್ತಿಯಲ್ಲಿ ಏಕಿಲ್ಲ? ಪಕ್ಷಗಳಿಗೆ ಹರಿದು ಬರುವ ದೇಣಿಗೆ ಬಗ್ಗೆ ಸಾರ್ವಜನಿಕವಾಗಿ ಏಕೆ ಬಹಿರಂಗಪಡಿಸುವುದಿಲ್ಲ? ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಮುಖ್ಯನ್ಯಾಯಾಮೂರ್ತಿ ಎಚ್ ಎಲ್ ದತ್ತು ಅವರನ್ನೊಳಗೊಂಡ ನ್ಯಾಯಾಪೀಠ, ಎಲ್ಲಾ ಆರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್ ಪಿ, ಸಿಪಿಐ, ಮತ್ತು ಸಿಪಿಎಂ ಪಕ್ಷಗಳಿಗೆ ನೋಟೀಸ್ ಜಾರಿ ಮಾಡಿದ್ದು, ಪಕ್ಷಗಳಿಗೆ ಹರಿದು ಬರುವ ದೇಣಿಗೆ ಬಗ್ಗೆ ಸಾರ್ವಜನಿಕವಾಗಿ ಘೋಷಿಸುವುದು ಪಕ್ಷಗಳ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದೆ.
ಆರ್ ಟಿಐ ಕಾಯ್ದೆಯಡಿಲ್ಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ಒಳಪಡುವಂತೆ ಕ್ರಮಕೈಗೊಳ್ಳಿ ಎಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನ್ಯಾಯಾಪೀಠ ನೋಟೀಸ್ ನೀಡಿದೆ.
ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸರ್ಜಿ ಸಲ್ಲಿಕೆಯಾಗಿತ್ತು. ಡೆಮೋಕ್ರಾಟಿಕ್ ರೀಫಾಮ್ರ್ ಸಂಘದ ಸ್ಥಾಪಕ ಸದಸ್ಯ ಪ್ರೊ.ಜಗದೀಪ್ ಸಿ.ಚೊಕ್ಕರ್ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಚಂದ್ರ ಅಗರ್ವಾಲ್ ಎಂಬುವರು ವಕೀಲ ಪ್ರಶಾಂತ್ ಭೂಷಣ್ ಮೂಲಕ ಈ ಕುರಿತು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಎಲ್ಲಾ ರಾಜಕೀಯ ಪಕ್ಷಗಳನ್ನು ಸಾರ್ವಜನಿಕರ ಸ್ವತ್ತು ಎಂದು ಪರಿಗಣಿಸಬೇಕು. ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತಂದು ಪಕ್ಷದ ಆಸ್ತಿ, ಪಡೆಯುವ ದೇಣಿಗೆ ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ನೀಡುವಂತೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Advertisement
Advertisement