

ಮುಂಬೈ: ದಾವೂದ್ ಇಬ್ರಾಹಿಂ ವಿಷಯದಲ್ಲಿ ಎನ್.ಡಿ. ಎ ಮಿತ್ರ ಪಕ್ಷ ಶಿವಸೇನೆ ಬಿಜೆಪಿಗೆ ಸವಾಲು ಹಾಕಿದ್ದು ಬಿಜೆಪಿಗೆ ಧೈರ್ಯವಿದ್ದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಕರೆತರಲಿ ಎಂದಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆದಿರುವ ಶಿವಸೇನೆ, ಈ ಹಿಂದೆ ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಜಿ ಕೇಂದ್ರ ಸಚಿವ ದಿ. ಗೋಪಿನಾಥ್ ಮುಂಡೆ ದಾವೂದ್ ಇಬ್ರಾಹಿಂ ನನ್ನು ಜೈಲಿಗೆ ಕಳಿಸುವ ಪ್ರತಿಜ್ಞೆ ಮಾಡಿದ್ದರು ಎಂದು ಶಿವಸೇನೆ ಹೇಳಿದೆ.
ದಾವೂದ್ ಇಬ್ರಾಹಿಂ ಶರಣಾಗತಿ ಬಗ್ಗೆ ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಸೃಷ್ಠಿಸಿದ್ದ ವಿವಾದವನ್ನು ಶಿವಸೇನೆ ತಳ್ಳಿಹಾಕಿದ್ದು, ದಾವೂದ್ ಇಬ್ರಾಹಿಂ ನಂತಹ ಕ್ರಿಮಿನಲ್ ಗಳನ್ನು ಬಂಧಿಸಬೇಕೆ ಹೊರತು ಅವರು ತಾವಾಗಿಯೇ ಶರಣಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ದಾವೂದ್ ಭಾರತಕ್ಕೆ ಬಂದು ಶರಣಾಗಲು ಬಯಸಿದ್ದ, ಆದರೆ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಆತನ ಬೇಡಿಕೆ ಸಂಬಂಧ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಈ ನಿರ್ಧಾರ ಕೇವಲ ಶರದ್ ಪವಾರ್ ಅವರದಲ್ಲ, ಯುಪಿಎ ಸರ್ಕಾರದ ಪಾಲು ಇತ್ತು ಎಂದು ರಾಮ್ ಜೇಠ್ಮಲಾನಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
Advertisement