ಚೆನ್ನೈ: ಅತ್ಯಾಚಾರ ಮಾಡಿದ ಯುವಕನಿಗೆ ಜಾಮೀನು ನೀಡಿ, ಸಂತ್ರಸ್ತೆಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ನೀಡಿದ್ದ ವಿವಾದಾತ್ಮಾಕ ಆದೇಶವನ್ನು ಶನಿವಾರ ಮದ್ರಾಸ್ ಹೈಕೋರ್ಟ್ ಹಿಂಪಡೆದಿದೆ.
ತಮಿಳುನಾಡಿನ ಮಹಿಳೆಯೊಬ್ಬರ ಮೇಲೆ ಆಕೆ ಅಪ್ರಾಪ್ತೆಯಾಗಿದ್ದಾಗ ಅತ್ಯಾಚಾರ ನಡೆದಿತ್ತು. ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದು, ಭವಿಷ್ಯದ ದೃಷ್ಟಿಯಿಂದ ಮಹಿಳೆ ರಾಜಿಮಾಡಿಕೊಳ್ಳಲಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ದೇವದಾಸ್ ಅವರು ಪ್ರಕರಣನ್ನು ಆಪ್ತ ಸಮಾಲೋಚನಾ ಕೇಂದ್ರಕ್ಕೆ ಒಪ್ಪಿಸಿದ್ದರು. ಅಲ್ಲದೆ ಸಂತ್ರಸ್ಥೆಯೊಂದಿಗೆ ಸಮಾಲೋಚನೆಗಾಗಿ ಅತ್ಯಾಚಾರ ಅಪರಾಧಿ ಮೋಹನ್ಗೆ ಜಾಮೀನು ಮಂಜೂರು ಮಾಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರಿ ಜತೆ ರಾಜಿ ಮಾಡಿಕೊಳ್ಳವಂತೆ ಸೂಚಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿತ್ತು.
ಮಹಿಳೆಯ ದೇಹ ಎಂಬುದು ಆಕೆಗೆ ದೇಗುಲವಿದ್ದಂತೆ ಅಲ್ಲಿ ಮಧ್ಯಸ್ಥಿಕೆ ವಹಿಸುವುದು ಸಲ್ಲ. ಅದೇ ವೇಳೆ ಇಂಥಾ ಪ್ರಕರಣಗಳಲ್ಲಿ ರಾಜಿ ಆಗುವುದರಿಂದ ಮಹಿಳೆಯ ಘನತೆಗೆ ಧಕ್ಕೆ ಉಂಟಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜುಲೈ 2012 ರಲ್ಲಿ ಮೋಹನ್ ಗೆ ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ ವಿಧಿಸಿತ್ತು.
Advertisement