ಭೂಪಾಲ್: ಮಧ್ಯಪ್ರದೇಶದ ನಿಗೂಢ ಸಾವು ಪ್ರಕರಣ ವ್ಯಾಪಂ ಹಗರಣ ದೇಶದೆಲ್ಲೆಡೆ ದೊಡ್ಡ ವಿಚಾರವಾಗಿದ್ದರೂ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರ ಕಣ್ಣಿಗೆ ಮಾತ್ರ ವ್ಯಾಪಂ ಹಗರಣ ಸಣ್ಣ ವಿಚಾರವಾಗಿ ಕಾಣುತ್ತಿದೆಯಂತೇ.
ವ್ಯಾಪಂ ಹಗರಣ ವಿಚಾರ ನಿಮಗೆ ದೊಡ್ಡ ವಿಚಾರವೇ ಆಗಿರಬಹುದು. ಆದರೆ ನಮಗೆ ಇದು ಸಣ್ಣ ವಿಚಾರವಾಗಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ವಿಜಯವರ್ಗೀಯ ಅವರು ಇದೀಗ ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೊಪ್ಪಿಸಿರುವುದರಿಂದ ಬಿಜೆಪಿಯ ನೈತಿಕ ಸ್ಥೈರ್ಯ ಕುಗ್ಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಇದರಿಂದ ಪಕ್ಷದ ನೈತಿಕ ಸ್ಥೈರ್ಯ ಎಂದಿಗೂ ಕುಗ್ಗಿಲ್ಲ. ಈ ರೀತಿಯ ಯಾವುದೇ ಸಮಸ್ಯೆಗಳು ಪಕ್ಷಕ್ಕೆ ಎದುರಾಗಿಲ್ಲ. ಯಾರಿಗೆ ನೈತಿಕ ಸ್ಥೈರ್ಯ ಕುಗ್ಗಿದೆಯೋ ಅವರು ಈ ಬಗ್ಗೆ ಚಿಂತನೆ ನಡೆಸಲಿ ಎಂದು ಹೇಳಿದ್ದಾರೆ.
ವಿಜಯವರ್ಗೀಯ ಅವರು ಇತ್ತೀಚೆಗಷ್ಟೇ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ನಿಗೂಢವಾಗಿ ಸಾವನ್ನಪ್ಪಿದ್ದ ಪತ್ರಕರ್ತ ಅಕ್ಷಯ್ ಸಿಂಗ್ ಅವರು ನನಗಿಂತ ದೊಡ್ಡವನೇ...? ಎಂದು ಕೇಳುವ ಮೂಲಕ ವಿವಾದಲ್ಲಿ ಸಿಲುಕಿದ್ದರು. ಇದೀಗ ಇದೇ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದಾದ್ಮಕ ಹೇಳಿಕೆ ನೀಡುವ ಮೂಲಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement