ಆರ್ ಟಿಐಗೆ ಅರ್ಜಿ ಸಲ್ಲಿಸಿ ಅಧಿಕಾರಿಗಳಿಂದ ಥಳಿತಕ್ಕೊಳಗಾದ ವೃದ್ಧ
ನವದೆಹಲಿ: ಮಾಹಿತಿ ಪಡೆಯಲು ಆರ್ ಟಿಐ ಗೆ ಅರ್ಜಿ ಸಲ್ಲಿಸಿದ್ದಕ್ಕೆ ಅಲ್ಲಿನ ಅಧಿಕಾರಿಗಳು 62ರ ವೃದ್ಧನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಜಮ್ಮು-ಕಾಶ್ಮೀರದ ಬದ್ಗಮ್ ಜಿಲ್ಲೆಯಲ್ಲಿ ನಡೆದಿದೆ.
62ರ ವೃದ್ಧರೊಬ್ಬರು ನಿರಾಶ್ರಿತ ವಲಸಿಗರಿಗೆ ಸರ್ಕಾರ ನೀಡುವ ಪರಿಹಾರ ವಸ್ತುಗಳ ಕುರಿತಂತೆ ಮಾಹಿತಿ ಪಡೆಯುವ ಸಲುವಾಗಿ ಆರ್ ಟಿಐ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ನಂತರ ಅಧಿಕಾರಿಗಳ ವರ್ತನೆ ವಿರುದ್ಧ ವೃದ್ಧ ತಿರುಗಿಬಿದ್ದಿದ್ದು, ಸರ್ಕಾರದ ಪರಿಹಾರ ವಸ್ತುಗಳ ಕುರಿತಂತೆ ವಾದ ಮಾಡಿದ್ದಾರೆ.
ಇದಕ್ಕೆ ಕೆಂಡಮಂಡಲವಾಗಿರುವ ಅಲ್ಲಿನ ಅಧಿಕಾರಿಗಳು ಹಾಗೂ ಸಹಾಯ ಸಿಬ್ಬಂಧಿಗಳು ಎಲ್ಲರೂ ಸೇರಿ ವೃದ್ಧಿನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಸ್ಥಳೀಯ ಕಾಲುವೆಯೊಂದಕ್ಕೆ ವೃದ್ಧನನ್ನು ಬಿಸಾಡಿದ್ದಾರೆ.
ನಿರಾಶ್ರಿತ ವಲಸಿಗರಿಗೆ ಸರ್ಕಾರ ನೀಡುವ ಪರಿಹಾರ ಕುರಿತಂತೆ ನನಗೆ ಕೆಲವೊಂದು ಮಾಹಿತಿ ತಿಳಿದಿತ್ತು. ಹೀಗಾಗಿ ನನ್ನ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಿದ್ದರು. ಅಲ್ಲದೆ, ಈ ಕುರಿತಂತೆ ಮಾಹಿತಿ ಕೇಳುವುದನ್ನು ಹಾಗೂ ಹೇಳುವುದನ್ನು ನಿಲ್ಲಿಸಬೇಕೆಂದು ಬೆದರಿಕೆ ಹಾಕಿದ್ದರು ಎಂದು ಥಳಿತಕ್ಕೊಳಗಾದ ವೃದ್ಧ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ