ಆಗ್ರಾ: ತಮ್ಮ ನಿಸ್ವಾರ್ಥ ಪ್ರೀತಿಗೆ ಧರ್ಮ ಅಡ್ಡಿ ಬಂದಿದ್ದಕ್ಕೆ ಮನನೊಂದ ಪ್ರೇಮಿಗಳಿಬ್ಬರು ಆಗ್ರಾದಲ್ಲಿರುವ ಪ್ರೇಮ ಮಂದಿರ ತಾಜ್ ಮಹಲ್ ಬಳಿ ಬ್ಲೇಡ್ನಿಂದ ಪರಸ್ಪರರ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ.
ಮದುವೆಗೆ ತಮ್ಮ ಪೋಷಕರು ಒಪ್ಪದ ಕಾರಣ ಮುಸ್ಲಿಂ ಯುವತಿ, ಹಿಂದೂ ಯುವಕನ ಪರಸ್ಪರ ಬ್ಲೇಡ್ನಿಂದ ಕತ್ತು ಕೊಯ್ದು ಕೊಂಡು ರಕ್ತ ಸ್ರಾವದಿಂದ ಅರೇ ಪ್ರಜ್ಞಾವಸ್ಥಿತಿಯಲ್ಲಿ ಬಿದ್ದಿದ್ದಾಗ ಸ್ಥಳಕ್ಕೆ ಬಂದ ವಿಭಾಗೀಯ ಅರಣ್ಯಾಧಿಕಾರಿಗಳು ಯುವ ಜೋಡಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಸದ್ಯ ಗಂಭೀರವಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ಡೆಹ್ರಾಡೂನ್ ನಿವಾಸಿ ರಾಜ್ವೀರ್ ಸಿಂಗ್ ಹಾಗೂ ಆಗ್ರಾದ ಶಬನಂ ಅಲಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ರಾಜ್ವೀರ್ ನಮ್ಮಿಬ್ಬರ ಮದುವೆಗೆ ಪೋಷಕರ ಒಪ್ಪಲಿಲ್ಲ. ಅವರ ಮನವೊಲಿಸುವ ಪ್ರಯತ್ನ ವಿಫಲವಾಗಿದೆ. ನಮ್ಮಿಬ್ಬರ ಸಂಬಂಧಕ್ಕೆ ಧರ್ಮ ಅಡ್ಡಿಯಾಗಿದೆ. ಧಾರ್ಮಿಕ ನಾಯಕರ, ಬಂಧುಗಳ ಮಧ್ಯಸ್ಥಿಕೆಯೂ ಪ್ರಯೋಜನವಾಗಿಲ್ಲ. ನಾವಿಬ್ಬರು ಜತೆ ಇರಲು ಸಾಧ್ಯವೇ ಇಲ್ಲ ಎಂದು ಮನವರಿಕೆ ಆದ ನಂತರ ಸಾಯುವ ನಿರ್ಧಾರ ಮಾಡಿದೆವು ಎಂದು ಪ್ರೇಮಿಗಳು ನಗರದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಎಂ.ಪಿ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ಯುವತಿಯ ಬಂಧುಗಳು ಅವರಿಬ್ಬರ ಮದುವೆ ಮಾಡಿಸಲು ಸಿದ್ಧವಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement