ಕಾರ್ಮಿಕರು
ಕಾರ್ಮಿಕರು

ಕಟ್ಟಡ ಕಾರ್ಮಿಕರಿಗೆ ಇಎಸ್‍ಐ

ಕಾರ್ಮಿಕ ಸಚಿವಾಲಯ ಶೀಘ್ರದಲ್ಲಿ ಕಟ್ಟಡ ಕಾರ್ಮಿಕರಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸಲಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ...
Published on

ನವದೆಹಲಿ: ಕಾರ್ಮಿಕ ಸಚಿವಾಲಯ ಶೀಘ್ರದಲ್ಲಿ ಕಟ್ಟಡ ಕಾರ್ಮಿಕರಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸಲಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಸೋಮವಾರ ಕಾರ್ಮಿಕರ ಸಮಾವೇಶ ನಡೆಯಲಿದ್ದು ಪ್ರಧಾನಿ ಮೋದಿ ಈ ಸೌಲಭ್ಯದ ಕುರಿತು ಪ್ರಕಟಿಸುವ ಸಾಧ್ಯತೆಗಳಿವೆ.ಜು.1ರಿಂದ ಮುಂಗಾರು ಅಧಿವೇಶನ ಅರಂಭವಾಗಲಿದ್ದು ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನಾಲ್ಕು ಮಸೂದೆಗಳನ್ನು ಮಂಡಿಸುವ ಯೋಜನೆಯನ್ನು ಕಾರ್ಮಿಕ ಸಚಿವಾಲಯ ಹೊಂದಿದೆ. ಈ ಮಸೂದೆಗೆಗಳಿಗೆ ವಿರೋಧ ಪಕ್ಷಗಳಿಂದ ಭಾರಿ ವಿರೋಧಗಳು ಎದುರಾಗುವ ನಿರೀಕ್ಷೆಗಳಿವೆ. ಇದಕ್ಕೆ ಮೊದಲೇ ಸಚಿವಾಲಯ ಅಸಂಘಟಿತ ಕಾರ್ಮಿಕರಿಗೆ ವಿಮಾ ಯೋಜನೆ ಪ್ರಕಟಿಸಲಿದೆ.
ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಘಟಿತ ವಲಯಕ್ಕೆ ಬರಲಿದ್ದು ಕಾರ್ಮಿಕರ ರಾಜ್ಯ ವಿಮೆ (ಇಎಸ್‍ಐಸಿ) ಅಡಿಯಲ್ಲಿ ಅವರಿಗೆ ಮಾತ್ರ ವಿಮಾ ಸೌಲಭ್ಯ ಸಿಗುತ್ತಿತ್ತು. ಆದರೆ ಅದೇ ಕಂಪನಿಗಳು ನಿಯೋಜಿಸಿರುವ ಅಪಾರ ಸಂಖ್ಯೆಯ ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗ ಕೇಂದ್ರ ಸರ್ಕಾರ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೂವಿಮಾ ಸೌಲಭ್ಯ ವಿಸ್ತರಿಸಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಅತಿ ಹೆಚ್ಚು ಅವಘಡಗಳಿಗೆ ಗುರಿಯಾಗುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಅವರನ್ನೂ ಸಹ ಇಎಸ್‍ಐ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಕಾರ್ಮಿಕರು ಸಂಪೂರ್ಣ ಆರೋಗ್ಯ ಸೌಲಭ್ಯ ಪಡೆಯಬಹುದು. ಅವಘಡಗಳು ಸಂಭವಿಸಿ ಅಂಗವೈಕಲ್ಯವಾದಾಗ, ಮಹಿಳೆಯರು ಹೆರಿಗೆ ಸೌಲಭ್ಯ, ನಿರುದ್ಯೋಗ ಭತ್ಯೆ, ಮೃತಪಟ್ಟಲ್ಲಿ ಅವರ ಸಂಬಂಧಿಕರಿಗೆವಿಮಾ ಸೌಲಭ್ಯ ಸಿಗಲಿದೆ. ಈ ಸೌಲಭ್ಯವನ್ನು ಪ್ರಕಟಿಸಿದ ನಂತರ ಇಎಸ್‍ಐಸಿ ತನ್ನ ಸಾಮಾಜಿಕ ಭದ್ರತಾ ಅಧಿಕಾರಿಗಳ ಮೂಲಕ ಭಾರತದಲ್ಲಿ ಎಷ್ಟು ಮಂದಿ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದರ ಸಮೀಕ್ಷೆ ನಡೆಸಲಿದೆ. ಈ ಸಂಖ್ಯೆ ಲಭ್ಯವಾದ ತಕ್ಷಣ ಸೌಲಭ್ಯ ವಿತರಣೆ ಅರಂಭಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜೊತೆಗೆ ಸದಸ್ಯರ ಸೇವೆಗಾಗಿ ಶೀಘ್ರದಲ್ಲಿ ಸಹಾಯವಾಣಿ ಆರಂಭಿಸುವುದಾಗಿ ಹೇಳಿದ್ದಾರೆ.
ನೋಂದಣಿಯಾದ ದಿನದಿಂದಲೇ ಕಾರ್ಮಿಕ ಮತ್ತು ಅವರ ಕುಟುಂಬಕ್ಕೆ ವಿಮೆ ಜಾರಿಗೊಳಿಸಲಾಗಿದೆ. ಆರೋಗ್ಯ ಸೌಲಭ್ಯ ಪಡೆಯಲು ಯಾವುದೇ ಮಿತಿ ಇರುವುದಿಲ್ಲ. ಇದರೊಂದಿಗೆ ಕಾಯಿಲೆ ಭತ್ಯೆಯಾಗಿ ಒಂದು ವರ್ಷದಲ್ಲಿ 91 ದಿನ ಅವರು ಪಡೆಯುವ ವೇತನದಲ್ಲಿ ಶೇ.70ರಷ್ಟು ನೀಡಲಾಗುವುದು. ಶೇ.90ರಷ್ಟು ಅಂಗವೈಕಲ್ಯ ಸೌಲಭ್ಯ, ಶೇ.90ರಷ್ಟು ಅವಲಂಬಿತರ ಸೌಲಭ್ಯ, ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ಅಂತ್ಯ ಸಂಸ್ಕಾರ ಹಣವಾಗಿ ರು.10 ಸಾವಿರ ನೀಡಲಾಗುವುದು.
ಈ ಇಎಸ್‍ಐಸಿ ನಿಯಮಗಳು 10 ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುವ ಸ್ಥಳಗಳಲ್ಲಿ ಅನ್ವಯವಾಗಲಿದೆ. ಮಾಸಿಕ ರು.15 ಸಾವಿರ ಪಡೆಯುವ ಕಾರ್ಮಿಕರು ಇದಕ್ಕೆ ಅರ್ಹರಾಗಲಿದ್ದಾರೆ. ಭಾರತದಲ್ಲಿ ನಿರ್ಮಾಣ ಕ್ಷೇತ್ರ ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ಕಲ್ಪಿಸಿರುವ ಕ್ಷೇತ್ರವಾಗಿದೆ. ಇಲ್ಲಿ ಅತಿಹೆಚ್ಚಿನ ಸಂಖ್ಯೆಯ ಅಸಂಘಟಿತ ಕಾರ್ಮಿಕರಿದ್ದು ವರ್ಷಕ್ಕೆ ಮೂರು ನಾಲ್ಕು ತಿಂಗಳು ಕೆಲಸವೇ ಇರುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com