ನವದೆಹಲಿ: ಮಧ್ಯಪ್ರದೇಶದ ವ್ಯಾಪಂ ಹಗರಣ ಕುರಿತು ಮಾಹಿತಿ ಹಕ್ಕು ಕಾಯ್ದೆಯಿಂದ ಇನ್ನಷ್ಟು ವಿಷಯಗಳು ಹೊರಬಂದಿವೆ. ಪರೀಕ್ಷೆ ಮಂಡಳಿ ಸ್ಥಾಪನೆಯಾಗಿ 45 ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೂ ಪರೀಕ್ಷೆ ವಿಧಿ ವಿಧಾನಗಳ ಲೆಕ್ಕಪರಿಶೋಧನೆ ಒಮ್ಮೆಯೂ ನಡೆದಿಲ್ಲ ಎಂಬ ಮಾಹಿತಿ ಆರ್ ಟಿಐ ಅರ್ಜಿಗೆ ಸಿಕ್ಕಿರುವ ಉತ್ತರದಿಂದ ಬಹಿರಂಗವಾಗಿದೆ.
ಮಂಡಳಿಯ ಗೌಪ್ಯ ಖಾತೆಯಲ್ಲಿ ಪರೀಕ್ಷೆ ವಿಧಿವಿಧಾನಗಳ ಸಂಪೂರ್ಣ ವಿವರಣೆ ನೀಡುವ ಅಗತ್ಯವಿದ್ದು, ಪರೀಕ್ಷೆ ನಡೆಸಿದ ಬಗೆ, ಪ್ರಶ್ನೆಪತ್ರಿಕೆ ರೂಪಿಸಿದವರ ವಿವರ, ಮುದ್ರಣವಾದ ಜಾಗ, ಸಾಗಣೆ ಖರ್ಚು, ಮೌಲ್ಯಮಾಪಕರ ವಿವರ, ಒಎಂಆರ್ ಶೀಟ್, ಇತ್ಯಾದಿ ಪರೀಕ್ಷೆ ಸಂಬಂಧ ವಿವರಗಳೆಲ್ಲವನ್ನೂ ಅದು ಒಳಗೊಂಡಿರಬೇಕಿರುತ್ತದೆ. ಆದರೆ ಆರ್ ಟಿಐ ಕಾರ್ಯಕರ್ತ ಅಜಯ್ ದುಬೆ ಕೇಳಿದ್ದ ಮಾಹಿತಿಯ ಪ್ರಕಾರ 1970ರಿಂದ ಇದ್ಯಾವ ವಿವರಗಳೂ ಲಭ್ಯವಿಲ್ಲ. ಅಸಲಿಗೆ ಆಡಿಟ್ ನಡೆದೇ ಇಲ್ಲ ಎಂದು ತಿಳಿದುಬಂದಿದೆ.
ತನಿಖೆಗೆ ಆಗ್ರಹ: ವ್ಯಾಪಂ ಹಗರಣಕ್ಕೆ ಸಂಬಂಧಿಸಿ ತನಿಖಾ ವರದಿ ಮಾಡಲು ಹೋಗಿದ್ದ ಪತ್ರಕರ್ತ ಅಕ್ಷಯ್ ಸಿಂಗ್ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮನವಿ ಮಾಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಘಟನೆ(ಯುನೆಸ್ಕೋ) ಮಹಾ ನಿರ್ದೇಶಕಿ ಇರಿನಾ ಬೊಕೋವಾ ಅವರು ಸಿಂಗ್ ಸಾವಿಗೆ ಸಂಬಂಧಿಸಿ ಅವರ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದ್ದಾರೆ.
Advertisement