ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಪಕ್ಷದ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಂಡಾಮಂಡಲವಾಗಿದ್ದಾರೆ
ಸಂಸತ್ತಿನ ಉಭಯ ಸದನಗಳಲ್ಲೂ ಲಲಿತ್ ಮೋದಿ ಪ್ರಕರಣ ಸಂಬಂಧ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಹಾಗೂ ವ್ಯಾಪಂ ಹಗರಣ ಸಂಬಂಧ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸೇರಿದಂತೆ ಇತರ ಪ್ರತಿ ಪಕ್ಷಗಳು ಮುಂಗಾರು ಅಧಿವೇಶನ ನಡೆಯಲು ಅನುವು ಮಾಡಿಕೊಡದೇ ಸದನದಲ್ಲಿ ಗದ್ದಲ ಸೃಷ್ಟಿಸಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಗಳ ಕಲಾಪವನ್ನು ಇಂದೂ ಸಹ ಮುಂದೂಡಲಾಗಿತ್ತು.
ಹೀಗಾಗಿ ಸಂಸತ್ತಿನಲ್ಲಿ ಮಾತಾನಾಡಿದ ಶಶಿ ತರೂರ್ ಕಾಂಗ್ರೆಸ್ ಪಕ್ಷ ಸಂಸತ್ತು ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಅಧಿವೇಶನ ಮಂದೂಡಲು ಅವಕಾಶ ಮಾಡಿಕೊಡಬಾರದು ಎಂದು ಶಶಿ ತರೂರ್ ಹೇಳಿದ್ದರು. ಇದರಿಂದ ಶಶಿ ತರೂರ್ ವಿರುದ್ಧ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ. ಜೊತೆಗೆ ಕಾಂಗ್ರೆಸ್ ನ ಹಲವು ನಾಯಕರು ಕೂಡ ಶಶಿ ತರೂರ್ ಪಕ್ಷದ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.
ಈ ಹಿಂದೆ ನರೇಂದ್ರ ಮೋದಿ ಅವರ ಸ್ವಚ್ಛಭಾರತ್ ಅಭಿಯಾನ ಹಾಗೂ ವಿದೇಶ ಪ್ರವಾಸದ ಬಗ್ಗೆ ಹಾಡಿ ಹೊಗಳಿದ್ದ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷೆ ಕೆಂಗಣ್ಣಿಗೆ ಗುರಿಯಾಗಿದ್ದರು.
Advertisement