ಈಡೇರಲಿಲ್ಲ ರಾಹುಲ್ ಗಾಂಧಿ ಕೊಟ್ಟ ಭರವಸೆ
ತಿರುಚ್ಚಿ: ಆಕೆ ಹುಲ್ಲು ಗುಡಿಸಲಿನ ಮನೆಯಲ್ಲಿ ಸುಮಾರು 45 ವರ್ಷಗಳಿಂದ ವಾಸಿಸುತ್ತಿರುವ ಬಡವಿಧವೆ. 2009ರ ಮೇ 8 ರಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಿರುಚ್ಚಿ ಪ್ರವಾಸ ಕೈಗೊಂಡಿದ್ದರು. ಗ್ರಾಮವೊಂದರಲ್ಲಿ ಪಾದಯಾತ್ರೆ ಕೈಗೊಂಡಿದ್ದ ರಾಹುಲ್ ಇದ್ದಕ್ಕಿದ್ದಂತೆ ಗುಡಿಸಲು ಮನೆಯೊಂದಕ್ಕೆ ತೆರಳಿ ಅಲ್ಲಿದ್ದ 74 ವರ್ಷದ ರಾಜಾಮ್ಮಾಳ್ ಎಂಬ ವೃದ್ದೆಯ ಕ್ಷೇಮಾ ಸಮಾಚಾರ ವಿಚಾರಿಸಿದರು.
ಬಡವರ ಮನೆಗೆ ಭಾಗ್ಯ ಲಕ್ಷ್ಮಿಯೇ ಬಂದಂತಾಯಿತು ಎಂದು ರಾಜಾಮ್ಮಾಳ್ ಸಂಭ್ರಮಿಸಿದಳು. ನಂತರ ರಾಹುಲ್ ಗಾಂಧಿ ಆಕೆಯನ್ನು ಮಾತನಾಡಿಸಿದರು. ತನಗೆ ಬರುತ್ತಿದ್ದ ಹಿಂದಿ ಭಾಷೆಯಲ್ಲಿ ಮಾತನಾಡಿದ ರಾಜಮ್ಮಾಳ್ ತನ್ನ ಪತಿ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದುದ್ದಾಗಿ. ತಾನು ಹಲವು ದಶಕಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದು. ತನಗೆ ಈ ಮನೆಯ ಖಾತೆ ಬೇಕೆಂದು ಯುವರಾಜನಲ್ಲಿ ಮನವಿ ಮಾಡಿದ್ದಳು.
ಕೂಡಲೇ ರಾಹುಲ್ ಗಾಂಧಿ ತಮ್ಮ ಸಹಾಯಕರನ್ನು ಕರೆದು ರಾಜಾಮ್ಮಾಳ್ ಗೆ ಮನೆಯ ಖಾತೆ ಕೊಡಿಸುವಂತೆ ಸೂಚಿಸಿ ಹೋದರು. ಅದಾದ ನಂತರ ರಾಜಾ ಕಾಲೊನಿಯಲ್ಲಿ ರಾಜಮ್ಮಾಳ್ ಜನಪ್ರಿಯ ವ್ಯಕ್ತಿಯಾಗಿಬಿಟ್ಟಳು.
2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರು ಬಂದು ತನ್ನನ್ನು ಸಂಪರ್ಕಿಸಿಲ್ಲ. ತನಗೆ ಇನ್ನೂ ಮನೆಯ ಖಾತೆ ಪತ್ರ ಸಿಗಲಿಲ್ಲ ಎಂದು ರಾಜಾಮ್ಮಾಳ್ ಮಾಧ್ಯಮದವರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾಳೆ.
ರಾಹುಲ್ ಗಾಂಧಿ ಆರು ವರ್ಷದ ನಂತರ ಮತ್ತೆ ಚಿರುಚ್ಚಿಗೆ ಇಂದು ಭೇಟಿ ನೀಡುತ್ತಿದ್ದಾರೆ. ಈವಾಗಲಾದರೂ ತನ್ನ ಬಹಳ ವರ್ಷಗಳ ಕನಸು ನೆರವೇರಲಿದೆ ಎಂಬ ಭರವಸೆಯಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾಳೆ ರಾಜಾಮ್ಮಾಳ್.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ