ಸೋನಿಯಾ ಗಾಂಧಿ ನನಗೆ ಬೈದಿಲ್ಲ: ಶಶಿ ತರೂರ್
ನವದೆಹಲಿ: ಸೋನಿಯಾ ಗಾಂಧಿ ನನಗೆ ಬೈದಿದ್ದಾರೆ ಎಂಬುದು ಸುಳ್ಳು ಪ್ರಚಾರ, ಇದು ಕೆಲವರು ಹುಟ್ಟು ಹಾಕಿದ ಸುಳ್ಳು ಸುದ್ದಿ ಎಂದು ಶಶಿ ತರೂರ್ ಹೇಳಿದ್ದಾರೆ. ನಾನು ರಾಜಕೀಯರಂಗಕ್ಕೆ ಪ್ರವೇಶಿಸಿದ್ದ ಸಂದರ್ಭದಲ್ಲಿ ಇಂಥಾ ವಿಷಯಗಳೆಲ್ಲಾ ಮನಸ್ಸಿಗೆ ಬೇಸರ ತರಿಸುತ್ತಿದ್ದವು. ಈಗ ಅದರೊಂದಿಗೆ ಹೋರಾಡುವ ತಾಕತ್ತು ಬಂದಿದೆ ಎಂದು ಮಾಧ್ಯಮವೊಂದರ ಜತೆ ಮಾತನಾಡಿದ ತರೂರ್ ಹೇಳಿದ್ದಾರೆ.
ಪ್ರತೀ ಭಾರತೀಯನ ಮನಸ್ಸಿನಲ್ಲಿರುವ ಮಾತನ್ನು ಚುಟುಕಾಗಿ ಹೇಳಿರುವುದರಿಂದಲೇ ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯದಲ್ಲಿ ಮಾಡಿದ ಭಾಷಣಕ್ಕೆ ಇಷ್ಟೊಂದು ಪ್ರಾಮುಖ್ಯತೆ ಲಭಿಸಿದ್ದು. ವಿಶ್ವ ವಿದ್ಯಾನಿಲಯದಲ್ಲಿ ಮಾಡಿದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡಾ ನನ್ನನ್ನು ಅಭಿನಂದಿಸಿದ್ದಾರೆ ಎಂದು ತರೂರ್ ಹೇಳಿದ್ದಾರೆ.
200 ವರ್ಷಗಳ ಕಾಲ ಬ್ರಿಟಿಷರ ವಸಾಹತು ಆಗಿದ್ದ ಭಾರತದಲ್ಲಿ, ಅವರ ಆಡಳಿತದಿಂದ ಆಗಿರುವ ನಷ್ಟಕ್ಕೆ ಪರಿಹಾರವನ್ನು ಪಾವತಿಸಬೇಕು ಎಂದು ಇಂಗ್ಲೆಂಡ್ನ ಆಕ್ಸ್ಫರ್ಡ್ನಲ್ಲಿ ಶಶಿ ತರೂರ್ ಭಾಷಣ ಮಾಡಿದ್ದರು. ಈ ಭಾಷಣದ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು, ಜನರಿಂದ ಪ್ರಶಂಸೆಗೆ ಪಾತ್ರವಾಗಿತ್ತು.
ಆದಾಗ್ಯೂ, ಬಿಜೆಪಿಯ ಮೂವರು ಸಚಿವರ ರಾಜಿನಾಮೆಗೆ ಒತ್ತಾಯಿಸಿ ಸಂಸತ್ ಕಲಾಪವನ್ನು ಅಸ್ತವ್ಯಸ್ಥಗೊಳಿಸುವ ಪರವಾಗಿ ನಾನಿಲ್ಲ ಎಂದು ಶಶಿ ತರೂರ್ ಹೇಳಿದ್ದಕ್ಕೆ ಸೋನಿಯಾ ಗಾಂಧಿ ಗರಂ ಆಗಿದ್ದು, ಕಾಂಗ್ರೆಸ್ ಪಕ್ಷದ ಸಂಸದರ ಸಭೆಯಲ್ಲಿ ತರೂರ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ