ಚೆನ್ನೈ: ಅಚ್ಚರಿಯ ಬೆಳವಣಿಗೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಸೋಮವಾರ ಸಾರಿಗೆ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದಾರೆ.
ಸಂಪುಟದಿಂದ ಬಾಲಾಜಿ ಅವರನ್ನು ವಜಾಗೊಳಿಸುವಂತೆ ಜಯಲಲಿತಾ ಅವರು ಮಾಡಿದ ಶಿಫಾರಸ್ಸನ್ನು ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರು ಅಂಗೀಕರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಇನ್ನು ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಐಎಡಿಎಕೆ ಪ್ರಧಾನ ಕಚೇರಿ, ಪಕ್ಷದ ಕರುರ್ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದಲೂ ಸೆಂಥಿಲ್ ಬಾಲಾಜಿ ಅವರನ್ನು ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದೆ.
ಸೆಂಥಿಲ್ ಬಾಲಾಜಿ ಹೊಂದಿದ್ದ ಸಾರಿಗೆ ಖಾತೆಯನ್ನು ಈಗ ಕೈಗಾರಿಕಾ ಸಚಿವ ಪಿ.ತಂಗಮಣಿ ಅವರಿಗೆ ವಹಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಪಕ್ಷದ ಕರುರ್ ಜಿಲ್ಲಾ ಕಾರ್ಯದರ್ಶಿಯ ಜವಾಬ್ದಾರಿಯನ್ನು ತಂಗಮಣಿಗೆ ನೀಡಲಾಗಿದೆ.
ದೀರ್ಘಕಾಲದಿಂದ ಜಯಲಲಿತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸೆಂಥಿಲ್ ಬಾಲಾಜಿ ಅವರನ್ನು ದಿಢೀರ್ ಸಚಿವ ಸ್ಥಾನ ಹಾಗೂ ಪಕ್ಷದಿಂದಲೂ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
Advertisement