
ನವದೆಹಲಿ: ಕೇಂದ್ರ ಶಿಕ್ಷಣ ಸಚಿವೆ ಸ್ಮೃತಿ ಇರಾನಿ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಗುರುದಾಸ್ ಕಾಮತ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗವು ಶನಿವಾರ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರು, ಸ್ಮೃತಿ ಇರಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಗುರುದಾಸ್ ಕಾಮತ್ ಅವರಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ವಾರದೊಳಗಾಗಿ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಮುನಿಸಿಪಲ್ ಚುನಾವಣೆ ಸಂಬಂಧ ಪ್ರಚಾರಕ್ಕೆಂದು ರಾಜಸ್ಥಾನದಲ್ಲಿರುವ ಹಳ್ಳಿಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಗುರುದಾಸ್ ಕಾಮತ್, ಬಿಜೆಪಿ ನಾಯಕಿ ಸ್ಮೃತಿ ಇರಾನಿಗೆ ಸಚಿವೆಯಾಗುವ ಅರ್ಹತೆಗಳು ಏನಿವೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮೋದಿ ಅವರಿಗೆ ರೈತರ ಬಗ್ಗೆ ಗಮನ ಹರಿಸುವುದಕ್ಕಿಂತ ಟಿವಿ, ಸೀರಿಯಲ್ ನೋಡುವುದರಲ್ಲಿ ಆಸಕ್ತಿ ಹೆಚ್ಚಿದೆ. ಮೋದಿ ಹಿತಾಸಕ್ತಿಯಿಂದಾಗಿ ಸ್ಮೃತಿ ಇರಾನಿಗೆ ಸಚಿವೆ ಸ್ಥಾನ ನೀಡಲಾಗಿದೆ. ಇರಾನಿ ಕುಟಂಬದವರು ಆರ್ಥಿಕವಾಗಿ ಹಿಂದುಳಿದವರು. ವರ್ಸೋವಾದಲ್ಲಿ ಫಾಸ್ಠ್ ಫುಡ್ ಹೋಟೆಲ್ ನಲ್ಲಿ ಕೆಲಸ ಮಾಡಿ, ಟೇಬಲ್ ಒರೆಸೋ ಕೆಲಸ ಮಾಡುತ್ತಿದ್ದವರು.
ಕೇವಲ 10ನೇ ತರಗತಿ ಓದಿರುವ ಇರಾನಿ, ಮುಂಬೈನ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡಿದಂತವರು. ನಂತರ ಆಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದು. ಇಂತಹ ಅವಿದ್ಯಾವಂತೆಗೆ ಕೇಂದ್ರದ ಸಚಿವ ಸ್ಥಾನ ನೀಡುವುದೆಂದರೆ, ಇದು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಮಾತ್ರ ಸಾಧ್ಯ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಮೃತಿ ಇರಾನಿಯವರನ್ನು ಮೋದಿ ಅವರ ಸಚಿವೆಯನ್ನಾಗಿ ಮಾಡಿದರು ಎಂದು ಹೇಳಿದ್ದರು.
Advertisement