ನವದೆಹಲಿ:ಈ ವರ್ಷ ಮುಂಗಾರು ಮಳೆ ಕಡಿಮೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾನ್ಸೂನ್ ಕೊರತೆಯಿಂದ ಕೃಷಿ ಉತ್ಪಾದನೆ ಕಡಿಮೆಯಾಗಿ ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಬಹುದು. ಆದರೆ ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ.
ರೈತರ ಅನುಕೂಲತೆ ದೃಷ್ಟಿಯಿಂದ ಹೊಸ ಬೆಳೆ ವಿಮಾ ಯೋಜನೆಯನ್ನು ತರಲಾಗುವುದು ಎಂದು ತಿಳಿಸಿದರು. ಧಾನ್ಯಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ನಮ್ಮ ದೇಶದಲ್ಲಿ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಆಯಾ ರಾಜ್ಯಗಳಲ್ಲಿ ಧಾನ್ಯಗಳ ಬೇಡಿಕೆ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯಲು ವರದಿ ತರಿಸಿಕೊಳ್ಳಲಾಗುವುದು ಎಂದು ಹೇಳಿದರು.
''ನಾವೀಗ ರಾಜ್ಯ ಸರ್ಕಾರಗಳ ಜತೆ ಮತ್ತು ಕೃಷಿ ಇಲಾಖೆಗಳ ಜೊತೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ನಿಭಾಯಿಸಲಿದ್ದೇವೆ. ದೇಶದ 580 ಜಿಲ್ಲೆಗಳಲ್ಲಿ ಆಕಸ್ಮಿಕ ಯೋಜನೆಗಳನ್ನು ತರಲು ಸರ್ಕಾರ ಸಿದ್ಧವಿದೆ ಎಂದರು.
ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಸಂದರ್ಭದಲ್ಲಿ ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಮಾತನಾಡಿದ ಅವರು, ''ನಾವು ಅಧಿಕಾರಕ್ಕೆ ಬಂದ ಸಮಯದಲ್ಲಿ ಬರಗಾಲ ಪರಿಸ್ಥಿತಿಯಿತ್ತು. ಎಲ್ಲರೂ ಆತಂಕಕ್ಕೀಡಾಗಿದ್ದರು. ಕೃಷಿ ಉತ್ಪಾದನೆಯಲ್ಲಿ ಕುಂಠಿತವಾಗಿತ್ತು. ಆದರೆ ನಮ್ಮ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿತು. ಮುಂದೆ ಈ ಹಿಂದಿನ ಅನುಭವದ ಮೇರೆಗೆ ನಾವು ಪರಿಸ್ಥಿತಿಯನ್ನು ಎದುರಿಸಲಿದ್ದೇವೆ.'' ಎಂದು ಹೇಳಿದರು.
ಕೇಂದ್ರ ಸರ್ಕಾರದ ಅಂಕಿಅಂಶ ಪ್ರಕಾರ, 2014-15 ಬೆಳೆ ವರ್ಷದಲ್ಲಿ ಆಹಾರಧಾನ್ಯಗಳ ಒಟ್ಟು ಉತ್ಪಾದನೆ 251.12 ದಶಲಕ್ಷ ಟನ್ ಆಗಿದೆ. ಇದಕ್ಕಿಂತ ಮೊದಲಿನ ವರ್ಷ 265.04 ದಶಲಕ್ಷ ಟನ್ ಆಗಿತ್ತು. ಮುಂಗಾರು ಮಳೆ ಕೊರತೆಯಿಂದ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ.
Advertisement