ನವದೆಹಲಿ: ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಸಂಸತ್ ನ ಸದಸ್ಯರು 108 ಗ್ರಾಮಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬಿರೇಂದರ್ ಸಿಂಗ್ ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬಿರೇಂದರ್ ಸಿಂಗ್ ಅವರು, ಮಾದರಿ ಗ್ರಾಮಗಳಾಗಿ ಪರಿವರ್ತಿಸುವ ಉದ್ದೇಶದಿಂದ 'ಸಂಸದರ ಆದರ್ಶ ಗ್ರಾಮ ಯೋಜನೆ'ಯಡಿಯಲ್ಲಿ 108 ಗ್ರಾಮಗಳ ದತ್ತು ಸ್ವೀಕಾರಕ್ಕೆ ಸಂಸತ್ ಸಂದಸ್ಯರು ಮುಂದಾಗಿದ್ದಾರೆ. ದತ್ತು ಸ್ವೀಕಾರಕ್ಕೆ ಮುಂದಾಗಿರುವ ಸದಸ್ಯರಲ್ಲಿ 55 ಮಂದಿ ಪಶ್ಚಿಮ ಬಂಗಾಳದ ಸಂಸದರಾಗಿದ್ದು, ಇನ್ನುಳಿದವರು ಇತರೆ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತಂದಿದ್ದರು. ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜೀವನ ಶೈಲಿ ಸುಧಾರಣೆ ತರುವ ಸಲುವಾಗಿ ಪ್ರಧಾನಿ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ದೇಶ ಬದಲಾಗಬೇಕು ಎಂದರೆ ಮೊದಲು ಹಳ್ಳಿಗಳ ಸ್ಥಿತಿ ಬದಲಾಗಬೇಕು.
ಹಾಗಾಗಿ ಸಚಿವರು ಗ್ರಾಮಗಳ ಅಭಿವೃದ್ಧಿಗಳತ್ತ ಗಮನ ಹರಿಸಬೇಕಿದೆ. ಹಳ್ಳಿಗಳ ಅಭಿವೃದ್ಧಿಗಾಗಿ ಇದೀಗ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯಲ್ಲಿ ಒಬ್ಬೊಬ್ಬ ಸಚಿವರು ಒಂದೊಂದು ಗ್ರಾಮಗಳನ್ನು ದತ್ತು ಪಡೆದು, ಆ ಗ್ರಾಮಗಳನ್ನು ಅಭಿವೃದ್ಧಿ ಪಡೆಸುವ ಜವಾಬ್ದಾರಿ ಹೊಂದಬೇಕು. ಗ್ರಾಮ ದತ್ತು ಪಡೆದ ಸಂಸದರು ಆ ಗ್ರಾಮದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಹೇಳಿದ್ದರು. ಮೋದಿ ಅವರ ಈ ಕರೆಗೆ ಸಂಸದರಿಂದ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಸಂಸದರು ಗ್ರಾಮಗಳನ್ನು ದತ್ತು ಪಡೆಯಲು ಮುಂದಾಗುತ್ತಿದ್ದಾರೆ.
Advertisement