ನಿತೀಶ್ ಕುಮಾರ್ ಸಿಎಂ ಅಭ್ಯರ್ಥಿ
ಪಾಟ್ನಾ:ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಜೆಡಿ(ಯು)-ಆರ್ ಜೆಡಿ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೋಮವಾರ ಘೋಷಿಸಲಾಗಿದೆ.
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಸಮ್ಮುಖದಲ್ಲಿ ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನಿತೀಶ್ ಕುಮಾರ್ ಹೆಸರನ್ನು ಘೋಷಣೆ ಮಾಡಿದರು.
ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ. ಅದಕ್ಕಾಗಿ ನಾವು ಒಟ್ಟು ಸೇರಿದ್ದೇವೆ. ನಿತೀಶ್ ಕುಮಾರ್ ಅವರ ಜೊತೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದುದರಿಂದ ನಾನು ಸಿಎಂ ಅಭ್ಯರ್ಥಿ ಅಲ್ಲ ಎಂದು ಲಾಲು ಪ್ರಸಾದ್ ಯಾದವ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಹೆಸರು ಘೋಷಣೆಯಾದ ಕೆಲ ಹೊತ್ತಿನ ಬಳಿಕ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಒಟ್ಟಿಗೆ ಚುನಾವಣೆಯನ್ನು ಎದುರಿಸಲಿವೆ. ಆರ್ ಜೆಡಿ ಮತ್ತು ಜೆಡಿಯು ಮೊದಲೇ ಒಂದಾಗಿದ್ದವು. ಅದಕ್ಕೆ ಈಗ ಕಾಂಗ್ರೆಸ್ ಹೊಸದಾಗಿ ಸೇರ್ಪಡೆಯಾಗಿದೆ ಅಷ್ಟೆ ಎಂದು ತಿಳಿಸಿದರು.
ಲಾಲು ಪ್ರಸಾದ್ ಯಾದವ್ ಜೊತೆಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಇರುವ ವದಂತಿಯನ್ನು ತಳ್ಳಿಹಾಕಿದ ನಿತೀಶ್ ಕುಮಾರ್, ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.
ಮೂರೂ ಪಕ್ಷಗಳು ನಾಳೆ ಪಾಟ್ನಾದಲ್ಲಿ ಸಭೆ ಸೇರಿ ಸೀಟು ಹಂಚಿಕೆ ಕುರಿತು ತೀರ್ಮಾನ ತೆಗೆದುಕೊಳ್ಳಲಿವೆ.