ನವದೆಹಲಿ: 2015ನೇ ಸಾಲಿನ ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದ್ದು, ಮತ್ತೊಮ್ಮೆ ಹೊಸದಾಗಿ ಪರೀಕ್ಷೆ ನಡೆಸುವಂತೆ ಸಿಬಿಎಸ್ಇಗೆ ಸೂಚಿಸಿದೆ.
ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಆರ್.ಕೆ. ಅಗರ್ ವಾಲ್ ಮತ್ತು ಅಮಿತಾವ್ ರಾಯ್ ಅವರ ಪೀಠ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಸುಪ್ರೀಂ ಪೀಠ, ಪರೀಕ್ಷೆಯನ್ನು ರದ್ದುಗೊಳಿಸಿ, ಮುಂದಿನ ನಾಲ್ಕು ವಾರಗಳಲ್ಲಿ ಮತ್ತೆ ಹೊಸದಾಗಿ ಪರೀಕ್ಷೆ ನಡೆಸುವಂತೆ ಸಿಬಿಎಸ್ಇಗೆ ಆದೇಶಿಸಿದೆ.
ಮೇ 3 ರಂದು ನಡೆದ ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷೆ (ಎಐಪಿಎಂಟಿ)ಯ ಪ್ರಶ್ನೆ ಪತ್ರಿಕೆಗಳು ಬಿಹಾರ, ಜಾರ್ಖಂಡ್, ರಾಜಸ್ಥಾನ, ಹರಿಯಾಣ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಮೊಬೈಲ್ ಮೂಲಕ ಬಹಿರಂಗವಾಗಿದ್ದವು. ಪ್ರಕರಣದ ಅರ್ಜಿದಾರರಲ್ಲೊಬ್ಬರಾದ ಪ್ರಶಾಂತ್ ಭೂಷಣ್ ಫಲಾನುಭವಿಗಳನ್ನು ಕಂಡುಹಿಡಿಯುವುದು ಕಷ್ಟಕರವಾದ್ದರಿಂದ ಮರುಪರೀಕ್ಷೆ ನಡೆಸುವುದೇ ಒಳಿತು ಎಂದು ಸಲಹೆ ನೀಡಿದ್ದರು.
ಸಿಬಿಎಸ್ಇ ಜೂನ್ 5 ರಂದು ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಬೇಕಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾದ್ದರಿಂದ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ಮಾಧ್ಯಮಿಕ ಶಿಕ್ಷಣದ ಕೇಂದ್ರೀಯ ಮಂಡಳಿಗೆ ಸೂಚನೆ ನೀಡಿತ್ತು.
Advertisement