ಅಮೃತಸರ: ಕ್ರಿಮಿನಲ್ ಎಂದು ತಪ್ಪಾಗಿ ಭಾವಿಸಿ ಪಂಜಾಬ್ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಅಕಾಲಿದಳದ ನಾಯಕ ಮುಖ್ ಜೀತ್ ಸಿಂಗ್ ಮುಖಾ ಅವರು ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸರು ಕಾರಿನೊಳಗಿದ್ದ ಮುಖಾ ಅವರನ್ನು ವಿಚಾರಣೆ ನಡೆಸಿ, ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮುಖಾ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಅಕಾಲಿ ದಳದ ನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕ್ರಿಮಿನಲ್ ಎಂದು ತಪ್ಪಾಗಿ ಭಾವಿಸಿ ನಡೆಸಿದ ಎನ್ ಕೌಂಟರ್ ನಲ್ಲಿ ಮುಖಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ತಮಗೆ ಬಂದ ಮಾಹಿತಿಯೊಂದರ ಪ್ರಕಾರ, ನಂಬರ್ ಪ್ಲೇಟ್ ಹೊಂದಿಲ್ಲದ ಐ20 ಕಾರಿನಲ್ಲಿ ಕ್ರಿಮಿನಲ್ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆ ಪ್ರಕಾರ ಪೊಲೀಸರು ತಪಾಸಣೆ ಹೋದಾಗ ಮುಖಾ ಕೂಡಾ ಗುಂಡಿನ ದಾಳಿ ನಡೆಸಿದ್ದರು. ಆಗ ನಡೆಸಿದ ಪ್ರತಿದಾಳಿಯಲ್ಲಿ ಮುಖಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಮೃತಸರ ಮುನ್ಸಿಪಲ್ ಕಾರ್ಪೋರೇಶನ್ ವಾರ್ಡ್ ನಂ16ರ ಯುವ ಅಕಾಲಿದಳದ ಇನ್ ಚಾರ್ಜ್ ಆಗಿದ್ದ ಮುಖಾ ಅವರನ್ನು ಪೊಲೀಸರು ವ್ಯವಸ್ಥಿತವಾಗಿ ಹತ್ಯೆಗೈದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
Advertisement