ರಾಜೀವ್ ಶುಕ್ಲಾ, ಪವಾರ್ರಿಂದ ದಾಖಲೆಗೆ ಸಹಾಯ
ನವದೆಹಲಿ: ಬ್ರಿಟನ್ನಿಂದ ಪೋರ್ಚುಗಲ್ಗೆ ಹೋಗುವ ಸಲುವಾಗಿ ಕೇವಲ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಅವರಷ್ಟೇ ಅಲ್ಲ, ಕಾಂಗ್ರೆಸ್ನ ರಾಜೀವ್ ಶುಕ್ಲಾ, ಎನ್ಸಿಪಿಯ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಕೂಡ ಸಹಾಯ ಮಾಡಿದ್ದರು ಎಂದು ಲಲಿತ್ ಮೋದಿ ಬಾಂಬ್ ಸಿಡಿಸಿದ್ದಾರೆ.
ಇಂಡಿಯಾ ಟುಡೆ ವಾಹಿನಿಗೆ ಸಂದರ್ಶನ ನೀಡಿರುವ ಅವರು, ವಿವಾದದ ಬಗ್ಗೆ ಮಾತನಾಡಿದ್ದಾರೆ. ನನ್ನ ಹಾಗೂ ವಸುಂಧರಾ ರಾಜೇ ಅವರ ಆತ್ಮೀಯ ಸಂಬಂಧ ಈಗಿನದ್ದಲ್ಲ. ಅವರು 30 ವರ್ಷಗಳಿಂದ ನಮ್ಮ ಕುಟುಂಬದ ಆಪ್ತ ಸ್ನೇಹಿತರಾಗಿದ್ದಾರೆ. ಅವರ ಆತ್ಮೀಯತೆ ಎಷ್ಟರ ಮಟ್ಟಿಗಿತ್ತೆಂದರೆ, ಪೋರ್ಚುಗಲ್ನಲ್ಲಿ ನನ್ನ ಪತ್ನಿಗೆ ಚಿಕಿತ್ಸೆ ಕೊಡಿಸಲು ಅವರೇ ಸ್ವತಃ ಕರೆದೊಯ್ದಿದ್ದರು. ಅಲ್ಲದೆ, ಇನ್ನೊಂದು ಬಾರಿ ಅವರು ಪೋರ್ಚುಗಲ್ಗೆ ಭೇಟಿ ನೀಡಿದ್ದರು. ಬ್ರಿಟನ್ನಲ್ಲಿ ಪೌರತ್ವ ಸಿಗುವ ಸಲುವಾಗಿ ಅವರು ಲಿಖಿತ ಪತ್ರ ಬರೆದು ಬೆಂಬಲ ಸೂಚಿಸಿದ್ದರು.
ಈ ಪ್ರಕರಣದಲ್ಲಿ ಸುಷ್ಮಾ ಸ್ವರಾಜ್ ಅವರ ಯಾವುದೇ ಪಾತ್ರವೂ ಇಲ್ಲ. ಅವರು ಕೇವಲ ನಾನು ಸಲ್ಲಿಸಿದ ದಾಖಲೆಗಳಿಗೆ ಮಾನವೀಯ ನೆಲೆಯಲ್ಲಿ ಸಹಿ ಹಾಕಿದ್ದಾರಷ್ಟೆ. ಇದನ್ನು ಕಾಂಗ್ರೆಸ್ನವರು ಬೇಕೆಂತಲೇ ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ಹಾಗೂ ಸಚಿವೆ ಸುಷ್ಮಾ ಸ್ವರಾಜ್ ಅವರ ಪರಿಚಯ ಇಂದು ನಿನ್ನೆಯದಲ್ಲ. ಅವರು ಸುಮಾರು 20 ವರ್ಷಗಳಿಂದ ನಮ್ಮ ಕುಟುಂಬ ಸ್ನೇಹಿತರಾಗಿದ್ದಾರೆ. ನನ್ನ ಎಲ್ಲ ಕಾನೂನು ಪ್ರಕರಣಗಳಲ್ಲಿ ಸ್ವರಾಜ್ ಕುಶಾಲ್ ಅವರು ನನ್ನ ಒಳಿತನ್ನೇ ಬಯಸುತ್ತಿದ್ದರು ಎಂದೂ ತಿಳಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನನ್ನ ವಿರುದ್ಧವಾಗಿತ್ತು. ಪಿ.ಚಿದಂಬರಂ ಅವರು ನನ್ನನ್ನು ದೇಶ ಬಿಟ್ಟು ಓಡಿಸಲು ಸಂಚು ರೂಪಿಸಿದ್ದರು. ಈ ಸಂದರ್ಭದಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಶಶಿ ತರೂರ್ ಸಹ ಸುಳ್ಳು ಹೇಳಿದ್ದರು. ಇದೇ ಕಾರಣಕ್ಕೇ ಅವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಅಲ್ಲದೆ, ಬ್ರಿಟನ್ನಲ್ಲಿ ನನ್ನ ಪೌರತ್ವಕ್ಕೆ ಯುಪಿಎ ಸರ್ಕಾರ ಅಡ್ಡಗಾಲು ಹಾಕಿತ್ತು ಎಂದು ಲಲಿತ್ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಕೇವಲ ಸುಷ್ಮಾ, ವಸುಂಧರಾ, ಪವಾರ್, ಪ್ರಫುಲ್, ಶುಕ್ಲಾ ಅವರಷ್ಟೇ ಅಲ್ಲ, ಹಲವಾರು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂದಿದ್ದಾರೆ.
ನಾನೇನು ದೇಶಭ್ರಷ್ಟನಲ್ಲ
ನನ್ನ ವಿರುದ್ಧ ಯಾವುದೇ ಒಂದು ಪ್ರಕರಣ ದಾಖಲಾಗಿರುವುದನ್ನು ಜಾರಿ ನಿರ್ದೇಶನಾಲಯ ತೋರಿಸಲಿ. ಸುಮ್ಮನೆ ಆರೋಪ ಮಾಡುವುದಲ್ಲ. ಸದ್ಯ ನನ್ನ ಪರವಾಗಿ ವಕೀಲರು ಹಾಜರಾಗುತ್ತಿದ್ದಾರೆ. ಈ ಎಲ್ಲ ಪ್ರಕರಣ ಗಳಲ್ಲೂ ಜಯಗಳಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ನಾನು ಭಾರತಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ. ಅಲ್ಲಿ ನನಗೆ ಸೆಕ್ಯುರಿಟಿ ಸಮಸ್ಯೆಗಳಿವೆ. ಈ ಪ್ರಕರಣದಲ್ಲಿ ಅರುಣ್ ಜೇಟ್ಲಿ ಅವರ ಪಾತ್ರದ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದಿದ್ದಾರೆ. ಸಂಡೆ ಟೈಮ್ಸ್ ನಲ್ಲಿ ಸುಷ್ಮಾ ಅವರ ಕುರಿತ ಸುದ್ದಿ ಬರಲು ರುಪರ್ಟ್ ಮುರ್ಡೋಕ್ ಅವರೇ ಕಾರಣ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.