'ರಾಜೇ ರಾಜಿನಾಮೆಗೆ ಸಿದ್ಧ, ಆದ್ರೆ ಲಲಿತ್ ಮೋದಿ ಪ್ರಕರಣದ ಇತರೆ ಆರೋಪಿಗಳು ರಾಜಿನಾಮೆ ನೀಡಬೇಕು'
ಜೈಪುರ/ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ಜತೆ ವ್ಯವಹಾರಿ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು, ಪ್ರಕರಣದ ನೈತಿಕ ಹೊಣೆ ಹೊತ್ತು ತಾವು ರಾಜಿನಾಮೆ ನೀಡಲು ಸಿದ್ಧ. ಆದರೆ ಪ್ರಕರಣದ ಇತರೆ ಆರೋಪಿಗಳು ಸಹ ರಾಜಿನಾಮೆ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟವಾಗಿ ಹೇಳಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಲಲಿತ್ ಮೋದಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ಇತರೆ ಆರೋಪಿ(ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್)ಗಳು ರಾಜಿನಾಮೆ ನೀಡಿದರೆ, ತಾನೂ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧ ಎಂದಿದ್ದಾರೆ.
ಒಂದು ವೇಳೆ ರಾಜೇ ಅವರಿಂದ ರಾಜಿನಾಮೆ ಪಡೆದರೆ, ಪ್ರಕರಣದ ಮತ್ತೊಬ್ಬ ಆರೋಪಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಂದಲೂ ರಾಜಿನಾಮೆ ಪಡೆಯುವ ಅನಿವಾರ್ಯತೆ ಈಗ ಬಿಜೆಪಿಗೆ ಎದುರಾಗಿದೆ.
ರಾಜೇ ಜತೆ ನಿರಂತರ ಸಂಪರ್ಕದಲ್ಲಿರುವ ಬಿಜೆಪಿ ಮುಖಂಡರು ಸದ್ಯಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದ್ದಾರೆ. ಅಲ್ಲದೆ ಆರ್ಎಸ್ಎಸ್ ಸಹ ಇದನ್ನೇ ಹೇಳಿದೆ ಎನ್ನಲಾಗಿದೆ.
(ಐಎಎನ್ ಎಸ್ ಮೂಲಗಳಿಂದ)