ನವದೆಹಲಿ: ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ರಾಜಕೀಯ ಜೀವನದಲ್ಲಿ ಆರೋಪ ಕೇಳಿ ಬಂದಾಗ ರಾಜಿನಾಮೆ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಬಿಜೆಪಿಯ ಹಿರಿಯ ತಲೆಯಾಳು ಎಲ್.ಕೆ.ಆಡ್ವಾಣಿ ಮೋದಿ ಸರ್ಕಾರಕ್ಕೆ ಕುಟುಕಿದ್ದಾರೆ.
ಮೋದಿ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್ ಮತ್ತು ಸ್ಮೃತಿ ಇರಾನಿ ಮತ್ತು ಮಹಾರಾಷ್ಟ್ರದಲ್ಲಿ ಪಂಕಜಾ ಮುಂಡೆ ಮತ್ತು ವಸುಂಧರಾ ರಾಜೆ ವಿರುದ್ಧದ ಹಾಲಿ ಇರುವ ಆರೋಪಗಳ ಹಿನ್ನೆಲೆಯಲ್ಲಿ ಆಡ್ವಾಣಿ ಹೇಳಿಕೆ ಮಹತ್ವ ಪಡೆದಿದೆ. 1996ರಲ್ಲಿ ಜೈನ್ ಹವಾಲಾ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಲೋಕಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೆ. ನ್ಯಾಯಾಲಯದಿಂದ ಆರೋಪ ಮುಕ್ತಗೊಂಡ ಬಳಿಕ 1998ರಲ್ಲಿ ಪುನರಾಯ್ಕೆಯಾಗಿದ್ದೆ ಎಂಬುದನ್ನೂ ಅವರು ನೆನಪಿಸಿಕೊಂಡಿದ್ದಾರೆ.
ಗಮನಾರ್ಹ ಅಂಶವೆಂದರೆ ಹಾಲಿ ವಿವಾದಕ್ಕೆ ಈಡಾಗಿರುವ ಬಿಜೆಪಿ ನಾಯಕಿಯರ ಹೆಸರನ್ನು ಹೆಸರಿಸದೇ ಪಕ್ಷದ ನಾಯಕತ್ವಕ್ಕೆ ಟಾಂಗ್ ನೀಡಿದ್ದಾರೆ. ಹವಾಲಾ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ತಕ್ಷಣ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದೆ. ತಕ್ಷಣವೇ ವಾಜಪೇಯಿಗೆ ದೂರವಾಣಿ ಮೂಲಕ ನಿರ್ಧಾರ ಪ್ರಕಟಿಸಿದೆ.
ಬಂಗಾಳಿ ದಿನಪತ್ರಿಕೆ ``ಆನಂದ ಬಜಾರ್ ಪತ್ರಿಕೆ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, `ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಸಂದರ್ಭದಲ್ಲಿ ತ್ಯಾಗಪತ್ರ ನೀಡಿದ್ದರು. ಇದು ಜನಸಂಘದ ಕಾಲದಿಂದಲೂ ನಡೆದು ಬಂದ ಪ್ರಕ್ರಿಯೆ ಎಂದು ಅವರು ತಿಳಿಸಿದ್ದಾರೆ.
ನಿರ್ಧರಿಸುವ ಹಂತದಲ್ಲಿಲ್ಲ:
ಹಾಲಿ ನಡೆಯುತ್ತಿರುವ ವಿವಾದಗಳಿಗೆ ಸಂಬಂಧಿಸಿದಂತೆ ವಸುಂಧರಾ ರಾಜೇ, ಸುಷ್ಮಾ ಸ್ವರಾಜ್ ತಮ್ಮ ಸ್ಥಾನಗಳಿಂದ ಹೊರ ನಡೆಯಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಡ್ವಾಣಿ ``ನನ್ನ ಬಗ್ಗೆ ಮಾತ್ರ ನಾನು ಹೇಳಬಲ್ಲೆ. ಇಷ್ಟು ಮಾತ್ರವಲ್ಲ, ನನ್ನದು ಈಗ ನೋಡುವ ಪಾತ್ರವಷ್ಟೇ, ಈ ಸರ್ಕಾರದಲ್ಲಿ ನಾನು ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರುವುದರಿಂದ ಈ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಇಷ್ಟೇ ಅಲ್ಲ, ಮತ್ತೊಬ್ಬರು ಏನು ಮಾಡುತ್ತಾರೆ ಎನ್ನುವುದು ಅವರ ವಿಚಾರ, ಅದು ಅವರ ತೊಂದರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ'' ಎಂದಿದ್ದಾರೆ. ಸಂದರ್ಶನಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಶೀದ್ ಅಳ್ವಿ ``ಆಡ್ವಾಣಿ ಹೇಳಿಕೆ ಬಿಜೆಪಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ತೋರಿಸುತ್ತದೆ. ಪ್ರಧಾನಮಂತ್ರಿ ಕಳಂಕಿತ ಸಚಿವರನ್ನು ರಕ್ಷಿಸದೆ, ಅವರು ರಾಜಿನಾಮೆ ನೀಡುವಂತೆ ಮಾಡಬೇಕು ಎಂಬ ಸಂದೇಶ ಹೊಂದಿದೆ'' ಎಂದಿದ್ದಾರೆ.
Advertisement