ಆಗ್ರಾ: ಸಾರ್ವಜನಿಕ ಸ್ಥಳದಲ್ಲಿ, ಗೋಡೆಗಳು, ಖಾಲಿ ಜಾಗಗಳು ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವವರ ಪಾಲಿಕೆ ಎಚ್ಚರಿಕೆ ಗಂಟೆ ಬಾರಿಸಿದಂತಾಗಿದೆ.
ಪ್ಲಾಟ್ ಫಾರ್ಮ್ ಬಳಿ, ವಾಹನ ನಿಲ್ದಾಣದ ಆವರಣದಲ್ಲಿ, ರೈಲ್ವೇ ಇಲಾಖೆ ಕಚೇರಿಯ ಸುತ್ತಮುತ್ತ ನಿರ್ಬಿಢೆಯಿಂದ ಮೂತ್ರವಿಸರ್ಜನೆ ಮಾಡುತ್ತಿದ್ದ 109 ಮಂದಿಯನ್ನು ಆಗ್ರಾದ ರೈಲ್ವೇ ಪೊಲೀಸರು ಬಂಧಿಸಿ 24 ಗಂಟೆಗಳ ಕಾಲ ಜೈಲಿನಲ್ಲಿಟ್ಟಿರುವ ಘಟನೆ ವರದಿಯಾಗಿದೆ. ಈ ರೀತಿ ಘಟನೆ ನಡೆದಿರುವುದು ದೇಶದಲ್ಲಿ ಇದೇ ಮೊದಲು.24ಗಂಟೆಗಳ ಬಂಧನದ ನಂತರ 100ರಿಂದ 500ರವರೆಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ.
ರೈಲ್ವೇ ನಿಲ್ದಾಣಗಳ ಸುತ್ತಮುತ್ತ ಮೂತ್ರವಿಸರ್ಜನೆಯಿಂದಾಗಿ, ಗೋಡೆಗಳೆಲ್ಲ ಅಂದಗೆಟ್ಟಿದ್ದಲ್ಲದೆ, ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ವಿಧಿಸಲು ರೈಲ್ವೆ ಪೊಲೀಸ್ ಇಲಾಖೆಯ ಗೋಪೇಶ್ ನಾಥ್ ಖನ್ನ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದರು.
48 ಗಂಟೆಗಳ ಕಾಲ ಗಸ್ತು ನಡೆಸಿದ ಪೊಲೀಸರು 109ಮಂದಿಯನ್ನು ಹಿಡಿದು ಹಾಕಿದ್ದಾರೆ. ಅವರಲ್ಲಿ ಶುಕ್ರವಾರ ಸೆರೆಸಿಕ್ಕವರು 27ಮಂದಿ. ಇದು ಮೋದಿ ಆರಂಭಿಸಿರುವ ಸ್ವಚ್ಛಭಾರತ ಅಭಿಯಾನದ ಭಾಗ ಎಂದಿರುವ ಗೋಪೇಶ್ ಖನ್ನ, ಈ ಥರದ ಅಪರಾಧ ಎಸಗುವವರ ಮೇಲೆ ಸೆಕ್ಷನ್34ರ ಅನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
Advertisement